Kshetra Samachara
ಉಡುಪಿ: ಕಳೆದ ಎರಡು ವರ್ಷಗಳಿಂದ ಉಡುಪಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಸಸ್ಪೆನ್ಸ್ ಕಾಯ್ದುಕೊಂಡು ಬಂದಿರುವ ಕಾಂಗ್ರೆಸ್ ನ ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್ , ಇಂದು ಶಾಸಕ ರಘುಪತಿ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ತಮ್ಮ ಮನೆಗೂ ಶಾಸಕರನ್ನು ಆಹ್ವಾನಿಸಿ, ಇಬ್ಬರೂ ಒಟ್ಟಿಗೆ ಉಪಾಹಾರ ಸೇವಿಸಿ ಹೊಸ ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಉಡುಪಿ ಕ್ಷೇತ್ರದಾದ್ಯಂತ ಹಡಿಲು ಭೂಮಿ ಕೃಷಿ ಕಾರ್ಯ ಭರದಿಂದ ಸಾಗಿದೆ. ಶಾಸಕ ರಘುಪತಿ ಭಟ್ ಇದರ ರೂವಾರಿ. ಇಂದು ಉಪ್ಪೂರಿನಲ್ಲಿ ನಡೆದ ಹಡಿಲು ಭೂಮಿ ನಾಟಿ ಕಾರ್ಯಕ್ಕೆ ತೆರಳಿದ ಪ್ರಮೋದ್ ಮಧ್ವರಾಜ್ , ಶಾಸಕ ರಘುಪತಿ ಭಟ್ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಶಾಸಕರು ಪ್ರಮೋದ್ ಮಧ್ವರಾಜ್ ಮನೆಯ ಗೋಶಾಲೆಗೆ ಭೇಟಿ ನೀಡಿದ್ದಾರೆ. ಒಟ್ಟಿಗೆ ಉಪಾಹಾರ ಸೇವಿಸಿದ್ದಾರೆ. ಹಡಿಲು ಭೂಮಿ ಕೃಷಿ ಆಂದೋಲನದ ಕುರಿತು ಕಾಂಗ್ರೆಸ್ ಮುಖಂಡರೇ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿರುವ ಹೊತ್ತಿನಲ್ಲಿ ಪ್ರಮೋದ್ ಮಧ್ವರಾಜ್ ಖುದ್ದು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ.
ಇವೆಲ್ಲ ಬೆಳವಣಿಗೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಸಣ್ಣ ಗೊಂದಲದಲ್ಲಿದ್ದಾರೆ. ಮುಂದೆ ಬರುವ ವಿಧಾನಸಭೆ ಚುನಾವಣೆಗೆ ತಯಾರಾಗಬೇಕಾದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಬಿಜೆಪಿ ಶಾಸಕರ ಜೊತೆ ಒಂದು ರೀತಿ ಸಾಫ್ಟ್ ಕಾರ್ನರ್ ಇರಿಸಿಕೊಂಡಿರುವುದು ಎಷ್ಟು ಸರಿ ಎಂಬ ಮಾತು ಕೇಳಿ ಬರುತ್ತಿದೆ.