ER NEWS
'ಬಿಜೆಪಿಯ ಉತ್ತರಗಳಿಗೆ ಪ್ರಶ್ನೆ ಕೇಳಲೇಬೇಕು' ಎಂದು ಬರೋಡಾದಲ್ಲಿ ವಿದ್ಯಾರ್ಥಿಗಳ ಮುಂದೆ ಅಬ್ಬರಿಸಿ ಅಪಹಾಸ್ಯಕ್ಕೀಡಾಗಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯವರು, ಟ್ವಿಟ್ಟರಲ್ಲಿ ಇಂದು ಹವಾಮಾನ ತಜ್ಞರಾಗಿದ್ದಲ್ಲದೆ, ತಮ್ಮ ಹಾಸ್ಯಪ್ರಜ್ಞೆಯನ್ನೂ ಮೆರೆದಿದ್ದಾರೆ.
'ಇಂದಿನ ಹವಾಮಾನದ ವರದಿ : ಚುನಾವಣೆಗೆ ಮೊದಲೇ ಇಂದು ಗುಜರಾತಿನಲ್ಲಿ ಬಣ್ಣಬಣ್ಣದ ಮಾತುಗಳ ಸುರಿಮಳೆಯಾಗಲಿದೆ' ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಣ್ಣದ ಮಾತುಗಳನ್ನು ಆಡಿದ್ದಾರಲ್ಲದೆ, ಸೋಮವಾರ ಗುಜರಾತಿನಲ್ಲಿರುವ ಮೋದಿಯವರ ಕಾಲನ್ನು ಎಳೆದಿದ್ದಾರೆ. ಅಚ್ಚರಿಯ ಸಂಗತಿಯೇನೆಂದರೆ, ಆಡಿದ ಮಾತುಗಳಿಗಾಗಿ ತಮಾಷೆಗೀಡಾಗುತ್ತಿದ್ದ, ಏನೇನೋ ಮಾತುಗಳನ್ನಾಡಿ ಅಪಹಾಸ್ಯಕ್ಕೀಡಾಗುತ್ತಿದ್ದ, ಟೀಕೆಗೊಳಗಾಗುತ್ತಿದ್ದ, ಟ್ರೋಲ್ ಗೊಳಗಾಗುತ್ತಿದ್ದ, ಅದನ್ನೇ ಮಾತಿನ ಜಾಣ್ಮೆ ಎಂದು ಸೋಷಿಯಲ್ ಮೀಡಿಯಾ ಹೆಡ್ ನಿಂದ ಕರೆಯಿಸಿಕೊಳ್ಳುತ್ತಿದ್ದ ರಾಹುಲ್ ಗಾಂಧಿ ಅವರು ಇದ್ದಕ್ಕಿದ್ದಂತೆ ಟ್ವಿಟ್ಟರಿನಲ್ಲಿ ಮಾತಿನ ಚತುರತೆ ಮೆರೆಯಲು ಆರಂಭಿಸಿದ್ದಾರೆ.
ನರೇಂದ್ರ ಮೋದಿ ಅವರನ್ನು ವ್ಯಂಗ್ಯವಾಡುತ್ತಿದ್ದರೂ ಅವರ ಮಾತುಗಳಲ್ಲಿ ಇದ್ದಕ್ಕಿದ್ದಂತೆ ಒಂದು ತೂಕ ಕಂಡುಬರುತ್ತಿದೆ, ಹಾಸ್ಯಪ್ರಜ್ಞೆ ಮೆರೆದಾಡುತ್ತಿದೆ, ಮಾತಿನ ಮೊನಚು ಎದುರಾಳಿಗಳನ್ನು ತಿವಿಯುತ್ತಿದೆ, ಹಾಗೆಯೆ ಅವರನ್ನು ಟೀಕಿಸುತ್ತಿರುವವರ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ರಾಹುಲ್ ಗಾಂಧಿಯವರ ವಿಭಿನ್ನ ವ್ಯಕ್ತಿತ್ವದ ಅನಾವರಣವಾಗಿದೆ. ಕಾರಣವಾದರೂ ಏನಿರಬಹುದು?
ಡೊನಾಲ್ಡ್ ಟ್ವೀಟ್ ಗೆ ರಾಹುಲ್ ಪ್ರತಿಟ್ವೀಟ್
ಟ್ರಂಪ್ ಅವರಿಗೆ ಮತ್ತೊಂದು ಅಪ್ಪುಗೆ ನೀಡಿ ಮೋದಿ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪಾಕಿಸ್ತಾನ ಮತ್ತು ಅದರ ನಾಯಕರೊಂದಿಗೆ ಅಮೆರಿಕದ ಸಂಬಂಧ ಉತ್ತಮವಾಗುತ್ತಿದೆ. ಅವರ ಸಹಕಾರಕ್ಕಾಗಿ ಧನ್ಯವಾದಗಳು ಎಂದು ಟ್ವೀಟಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿಯವರು, ಮೋದಿಯವರೆ ಬೇಗ, ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಅಪ್ಪುಗೆ ನೀಡಿ ಎಂದು ಕಾಲೆಳೆದಿದ್ದರು. ಇದಕ್ಕೂ ಮೊದಲು ಭಾರತ ಮತ್ತು ಅಮೆರಿಕದ ಸಂಬಂಧ ಬಲವಾಗುತ್ತಿದೆ ಎಂದು ಮೋದಿ ಹೇಳಿದ್ದನ್ನು ರಾಹುಲ್ ಟೀಕಿಸಿದ್ದರು.
ರಾಹುಲ್ ಅವರ ಟ್ವಿಟ್ಟರ್ ಖಾತೆ ಜಾಲಾಡಿ
ಈ ನಿರಾಶಾವಾದಿಗಳು ತೊಲಗುವುದಿಲ್ಲವೇಕೆ
ಜಿಎಸ್ಟಿಯನ್ನು ಜಾರಿಗೆ ತಂದ ನಂತರ ಭಾರತದ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ವರದಿ ನೀಡಿದ ನಂತರ, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ರಾಹುಲ್ ಅವರು, 'ಈ ನಿರಾಶಾವಾದಿಗಳು ತೊಲಗುವುದಿಲ್ಲವೇಕೆ' ಎಂದು ವಾಗ್ಬಾಣ ಎಸೆದಿದ್ದರು. ಭಾರತದ ಆರ್ಥಿಕತೆಯಲ್ಲಿ ನ್ಯೂನತೆ ಕಂಡುಹಿಡಿಯುತ್ತಿರುವವರು ನಿರಾಶಾವಾದಿಗಳು ಎಂದು ಈ ಮೊದಲು ಮೋದಿ ಟಾಂಗ್ ನೀಡಿದ್ದರು. ಈ ಮಾತು ಕುರಿತಂತೆ ಸ್ವಾರಸ್ಯಕರ ವಾದಪ್ರತಿವಾದಗಳು ಟ್ವಿಟ್ಟರಿನಲ್ಲಿ ನಡೆದಿವೆ. ಆಸಕ್ತಿಯಿರುವವರು ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ಜಾಲಾಡಬಹುದು.
ಅಮಿತ್ ಶಾ ಮತ್ತು ಮೋದಿ ವಿರುದ್ಧ ರಾಹುಲ್ ವ್ಯಂಗ್ಯ
ಬೇಟಿ ಬಚಾವೋದಿಂದ ಬೇಟಾ ಬಚಾವೋ
ಇದಕ್ಕೂ ಮೊದಲು, ಅಮಿತ್ ಶಾ ಅವರ ಮಗ ಜಯ್ ಶಾ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ನಂತರ, 'ಆಹಾ ದೇಶದಲ್ಲಿ ಎಂತಹ ಬದಲಾವಣೆ, ಬೇಟಿ ಬಚಾವೋದಿಂದ ಬೇಟಾ ಬಚಾವೋ ಆರಂಭವಾಗಿದೆ' ಎಂದು ರಾಹುಲ್ ಗಾಂಧಿಯವರು ಅಮಿತ್ ಶಾ ಮತ್ತು ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದರು. ಬೇಟಿ ಬಚಾವೋ, ಬೇಟಿ ಪಢಾವೋ ಎಂಬುದು ನರೇಂದ್ರ ಮೋದಿ ಅವರ ಕೇಂದ್ರ ಸರಕಾರದ ಯೋಜನೆಗಳಲ್ಲಿ ಒಂದು.
ಮಾತಿನ ಚಾತುರ್ಯ ಬಂದಿದ್ದಾದರೂ ಎಲ್ಲಿಂದ?
ಮೋದಿ ಗುಜರಾತಿಯನ್ನು ಚಂದ್ರನಲ್ಲಿಗೆ ಕಳಿಸುತ್ತಾರೆ
ಬರೋಡಾದಲ್ಲಿ ಯುವಕಯುವತಿಯನ್ನು ಉದ್ದೇಶಿಸಿ ಮಾತನಾಡಿದ ನಂತರ, 'ಮೋದಿಯವರು ಗುಜರಾತಿನ ಎಲ್ಲರನ್ನೂ ರಾಕೆಟ್ ಮೂಲಕ ಚಂದ್ರನಲ್ಲಿಗೆ ಕಳಿಸುತ್ತಾರೆ. 2028ರೊಳಗೆ ಗುಜರಾತಿನ ಎಲ್ಲ ನಾಗರಿಕರಿಗೆ ಚಂದ್ರನ ಮೇಲೆ ಒಂದು ಮನೆಯನ್ನು ನಿರ್ಮಿಸಿಕೊಡುತ್ತಾರೆ ಮತ್ತು 2030ರೊಳಗೆ ಚಂದ್ರನನ್ನೇ ಭೂಮಿಯ ಮೇಲೆ ತರುತ್ತಾರೆ!' ಎಂದು ಟ್ವೀಟ್ ಮಾಡಿದ್ದರು. ಇಂತಹ ಅದ್ಭುತವಾದ ಕಲ್ಪನೆಗಳು, ಮಾತಿನ ಚಾತುರ್ಯ ರಾಹುಲ್ ಗಾಂಧಿಗೆ ಬಂದಿದ್ದಾದರೂ ಎಲ್ಲಿಂದ?