Kshetra Samachara

Local News Subject: 
ಧಾರವಾಡ: ಕಾನೂನು ಅರಿವು ಪ್ರತಿ ನಾಗರಿಕನ ಮೂಲಭೂತ ಆದ್ಯತೆಯಾಗಲಿ; ನ್ಯಾ. ಅಮೋಲ ಹಿರೇಕೊಡಿ
City: 
Hubballi-Dharwad
Upload Image: 
PublicNext--648342--node-nid
Category: 
Law and Order
Body: 

ಧಾರವಾಡ: ಬಾಲ್ಯ ವಿವಾಹ, ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಸೇರಿದಂತೆ ಸಮಾಜದಲ್ಲಿ ನಿತ್ಯ ಅನೇಕ ಅಪರಾಧ ಕೃತ್ಯಗಳು ನಡೆಯಲು ಜನರಲ್ಲಿ ಕಾನೂನುಗಳ ಅರಿವಿಲ್ಲದಿರುವುದೇ ಮುಖ್ಯ ಕಾರಣ. ಆದ್ದರಿಂದ ಕಾನೂನು ಅರಿವು ನಮ್ಮ ಮೂಲಭೂತ ಅಗತ್ಯವಾಗಲಿ ಎಂದು ಧಾರವಾಡದ ನಾಲ್ಕನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ ಹಿರೇಕೊಡಿ ಹೇಳಿದರು.

ಧಾರವಾಡದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರೇಮಲ್ಲೂರ ಈಶ್ವರನ್ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಕಾನೂನಿನ ಅರಿವು ಮತ್ತು ಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹಳ್ಳಿ ಹಳ್ಳಿಗೆ ಮನೆ ಮನೆಗೆ ಕಾನೂನು ಅರಿವು ಮೂಡಿಸುವ ಜೊತೆಗೆ ಅರ್ಹರಿಗೆ ಕಾನೂನಿನ ನೆರವು ನೀಡುವ ಘನ ಉದ್ದೇಶದಿಂದ ಸರ್ವೋಚ್ಚ ನ್ಯಾಯಾಲಯ ಆರಂಭಿಸಿದ ಈ ಅಭಿಯಾನ ಯಶಸ್ವಿಗೊಳಿಸಲು ಮುಂದಾಗಬೇಕು' ಎಂದರು.

ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲ ಬಸವರಾಜ ತಲವಾಯಿ ಮಾತನಾಡಿ, ಅನ್ಯಾಯಕ್ಕೊಳಗಾದಾಗ ನ್ಯಾಯ ಪಡೆಯುವುದು ಪ್ರತಿಯೊಬ್ಬರ ಹಕ್ಕು ಅಂತೆಯೇ ಕಾನೂನುಗಳ ಪಾಲನೆ ಕೇವಲ ಸರ್ಕಾರ, ನ್ಯಾಯಾಲಯ ಅಥವಾ ಪೊಲೀಸರ ಕೆಲಸವಲ್ಲ ಅದು ಪ್ರತಿ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣದ ಕನಸಿನೊಂದಿಗೆ ಸಂವಿಧಾನದ ಆಶಯಗಳನ್ನು ಈಡೇರಿಸಲು ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗುವ ಅಗತ್ಯವಿದೆ. ಈ ದಿಸೆಯಲ್ಲಿ ಪ್ರಾಧಿಕಾರದ ಕಾನೂನು ಅರಿವು ನೆರವು ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಈರಣ್ಣ ಇಂಜಗನೇರಿ, ಅರೇ ಕಾನೂನು ಸ್ವಯಂ ಸೇವಕ ಸಂಕಲ್ಪ ಸಂಸ್ಥೆಯ ಪ್ರಕಾಶ ಹೂಗಾರ, ಬಸಪ್ಪ ಸಂಗಾನಟ್ಟಿ, ಚಂದ್ರಶೇಖರ ಹಡಪದ, ನೀಲಮ್ಮ ಮೇಟಿ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ 200ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Reach Count: 
11310
Show Detail Screen Advertisement: 
Yes