Public News
ಬೆಂಗಳೂರು: ಸಿಲಿಕಾನ್ ಸಿಟಿ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲ್ಲೇ ಇವೆ. ಹೀಗಾಗಿ ಅಪರಾಧ ಚಟುವಟಿಕೆ ನಡೆಯದಂತೆ, ಒಂದು ವೇಳೆ ನಡೆದರೂ ತಕ್ಷಣ ಹಾಜರಾಗಿ ಸೂಕ್ತ ಕ್ರಮಕೈಗೊಳ್ಳಲು ನಿಯೋಜಿಸಲಾಗಿರುವ ಹೊಯ್ಸಳ-ಚೀತಾಗಳಿಗೆ ಸದ್ಯದಲ್ಲೇ ಹೊಸ ಕಮಾಂಡ್ ಬರಲಿದೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸರಗಳ್ಳತನ, ಸುಲಿಗೆ, ದರೋಡೆಯಂತಹ ಪ್ರಕರಣ ತಪ್ಪಿಸಲು ಹೊಯ್ಸಳ-ಚೀತಾ ಸಿಬ್ಬಂದಿಗೆ ಹೊಸ ವ್ಯವಸ್ಥೆ ರೂಪಿಸಲು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು 272 ಹೊಯ್ಸಳ ವಾಹನಗಳು, 232 ಚೀತಾ ಬೈಕ್ಗಳು ಗಸ್ತು ತಿರುಗುತ್ತಿವೆ. ಹೊಯ್ಸಳ ಬೀಟ್ ವ್ಯವಸ್ಥೆ ಸಂಬಂಧ ಇಷ್ಟು ವರ್ಷಗಳ ಕಾಲ ಆಯಾ ಪೊಲೀಸ್ ಠಾಣಾಧಿಕಾರಿಗಳೇ ನಿಯಂತ್ರಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ನಿಂದಲೇ ನಿಗಾ ವಹಿಸಲಾಗುತ್ತದೆ.
ಪೊಲೀಸರು ಗಸ್ತು ತಿರುಗದೆ ಒಂದೇ ಕಡೆ ಹೊಯ್ಸಳ ಇರುವುದು ಕಂಡುಬಂದರೆ ಜಿಪಿಎಸ್ ಸಿಸ್ಟಮ್ನಲ್ಲಿ ಎಚ್ಚರಿಕೆ ಬರುವ ಅಲರ್ಟ್ ವ್ಯವಸ್ಥೆ ಸಿದ್ಧಪಡಿಸಲಾಗುತ್ತಿದೆ. ತಮಗೆ ನೀಡಿರುವ ಏರಿಯಾಗಳಲ್ಲಿ ಸದಾಕಾಲ ಗಸ್ತು ತಿರುಗಬೇಕು. ತುರ್ತು ಸಂದರ್ಭ ಹೊರತುಪಡಿಸಿ 10 ನಿಮಿಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಹೊಯ್ಸಳ ಇರುವಂತಿಲ್ಲ. ನೀಡಲಾಗಿರುವ ಬೀಟ್ನಲ್ಲಿ ಏನಾದರೂ ಅಪರಾಧ ಪ್ರಕರಣ ನಡೆದರೆ ಆಯಾ ಪೊಲೀಸರನ್ನೇ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ.