Public News
ಬೆಂಗಳೂರು: ಖಾಸಗಿ ಸುದ್ದಿವಾಹಿನಿಯೊಂದು ನಡೆಸಿದ ಸ್ಟಿಂಗ್ ಆಪರೇಷನ್ ಕಾರ್ಯಾಚರಣೆಯಲ್ಲಿ ಸಚಿವೆ 'ಮಾತೃಪೂರ್ಣ ಯೋಜನೆ' ಅಡಿಯಲ್ಲಿ ಮೊಟ್ಟೆ ವಿತರಿಸುವ ಟೆಂಡರ್ ಹಂಚಿಕೆಯಲ್ಲಿ ಲಂಚದ ಆಮಿಷವೊಡ್ಡಿದ ಅಂಶ ಹೊರದಿದ್ದಿದೆ.
ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಅಂಗನವಾಡಿ ಮೂಲಕ ಗರ್ಭಿಣಿಯರು, ಅಪೌಷ್ಟಿಕ ಮಕ್ಕಳು ಮತ್ತು ಬಾಣಂತಿಯರಿಗೆ ಟೆಂಡರ್ ಮೂಲಕ ಮೊಟ್ಟೆ ವಿತರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸಿತ್ತು. ಈ ಟೆಂಡರ್ ಪಡೆಯುವವರು ಪ್ರತಿ ತಿಂಗಳು ಸಚಿವೆ ಶಶಿಕಲಾ ಜೊಲ್ಲೆಗೆ ತಿಂಗಳಿಗೆ ಒಂದು ಕೋಟಿ ನೀಡಬೇಕು ಎನ್ನುವ ಸಂಭಾಷಣೆ ಸ್ಟಿಂಗ್ ಆಪರೇಷನ್ನಲ್ಲಿ ರೆಕಾರ್ಡ್ ಆಗಿದೆ. ಟೆಂಡರ್ ಪಡೆಯುವ ವೇಷದಲ್ಲಿ ಖಾಸಗಿ ವಾಹಿನಿ ಈ ಕಾರ್ಯಾಚರಣೆ ನಡೆಸಿತ್ತು.
ಈ ಪ್ರಕರಣ ಹೊರಬೀಳುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್, "ರಾಜ್ಯ ಸರ್ಕಾರ 'ದಿನಕ್ಕೊಂದು ಭ್ರಷ್ಟಾಚಾರ' ಯೋಜನೆ ಹಾಕಿಕೊಂಡಿದ್ದರ ಭಾಗವಾಗಿ ಈಗ ಸಚಿವೆ ಶಶಿಕಲಾ ಜೊಲ್ಲೆಯವರ ಮೊಟ್ಟೆ ಟೆಂಡರ್ ಕಿಕ್ ಬ್ಯಾಕ್ ಬೇಡಿಕೆ ಇಡುವ ಹಗರಣ ಬಯಲಾಗಿದೆ. ಸರ್ಕಾರಕ್ಕೆ ಸ್ವಲ್ಪವಾದರೂ ಮರ್ಯಾದೆ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆದು, ಹಗರಣವನ್ನು ತನಿಖೆಗೆ ವಹಿಸಬೇಕು. #ಮೊಟ್ಟೆತಿಂದಬಜೆಪಿಸರ್ಕಾರ" ಎಂದು ಕುಟುಕಿದೆ.
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ, "ಬಿಜೆಪಿಯಲ್ಲಿ ಎಲ್ಲೆಲ್ಲೂ ಕಮಿಷನ್ ದಂಧೆ, ಈಗ ಮೊಟ್ಟೆ ವಿತರಣೆಯಲ್ಲೂ ಭ್ರಷ್ಟಾಚಾರ ಬಯಲಾಗಿದೆ. ಅಬಕಾರಿ ಇಲಾಖೆಯಲ್ಲೂ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆಯಿಟ್ಟ ನಂತರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲೂ ಆರೋಪ ಕೇಳಿ ಬಂದಿದೆ. ಮುಖ್ಯಮಂತ್ರಿಗಳು ಶೀಘ್ರ ಕ್ರಮವನ್ನು ತೆಗೆದುಕೊಳ್ಳಲಿ" ಎಂದು ಆಗ್ರಹಿಸಿದ್ದಾರೆ.