Kshetra Samachara
ಮಂಗಳೂರು: ಬ್ಯಾರಿ ಜಾನಪದ ಕಲೆಗಳು ಮರೆಯಾಗುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಈ ಕಲೆಗಳನ್ನು ಉಳಿಸಿ ಮುಂದಿನ ಜನಾಂಗಕ್ಕಾಗಿ ಉಳಿಸಲು ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಸರ್ಟಿಫಿಕೇಟ್ ಕೋರ್ಸನ್ನು ಆರಂಭಿಸದೆ. ಈ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆರಂಭಗೊಂಡ ಬ್ಯಾರಿ ಜಾನಪದ ಕಲೆಗಳ ಕೋರ್ಸ್ಗೆ ಯಶಸ್ಸು ದೊರಕಿದೆ ಎಂದು ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಸಂತ ಅಲೋಶಿಯಸ್ ಕಾಲೇಜಿನ ಮಾಫೇಯಿ ಸೆಂಟರ್ ಏರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆದ 'ಬ್ಯಾರಿ ದಫ್, ಕೋಲ್ಕಲಿ, ಒಪ್ಪನೆ ಪಾಟ್, ಕೈಕೊಟ್ಟ್ ಪಾಟ್ ಜಾನಪದ ಕಲೆಗಳ ಕೋರ್ಸ್ ತರಬೇತಿಯ ಪ್ರಮಾಣ ಪತ್ರ ವಿತರಣಾ ಹಾಗೂ ಪ್ರತಿಭಾ ಪ್ರದರ್ಶನ ಸಮಾರಂಭ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮುಂಚೆ ಕೈಕೊಟ್ಟು, ಒಪ್ಪನೆ, ಕೋಲ್ಕಲಿ ಜಾನಪದ ಹಾಡುಗಳನ್ನು ನಮ್ಮ ಊರಲ್ಲಿ ಕಾರ್ಯಕ್ರಮದಲ್ಲಿ ಪ್ರದರ್ಶಿಸಲು ಕೇರಳದ ಕಲಾವಿದರನ್ನು ಕರೆಯಬೇಕಾಗಿತ್ತು. ಇದೀಗ ಬ್ಯಾರಿ ಅಕಾಡೆಮಿ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಬ್ಯಾರಿ ಜಾನಪದ ಕಲೆಗಳ ಬಗೆಗಿನ ಕೋರ್ಸ್ ಆರಂಭಿಸಿ ಹೊಸ ಕಲಾವಿದರನ್ನು ಸೃಷ್ಟಿ ಮಾಡೋ ಜೊತೆಗೆ ಉದ್ಯೋಗ ಅವಕಾಶ ಸೃಷ್ಟಿಸಿದೆ. ಇನ್ನು ಮುಂದಕ್ಕೆ ಅಕಾಡೆಮಿ ನೇತೃತ್ವದಲ್ಲಿ ಮಂಗಳೂರಲ್ಲಿ ಕೋರ್ಸ್ ಪಡೆದ ವಿದ್ಯಾರ್ಥಿಗಳು ತರಬೇತಿ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದ ಉದ್ಘಾಟಕ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್. ಜೆ. ಮಾತನಾಡಿ, ಪ್ರಾದೇಶಿಕ ಭಾಷೆಗಳಿಗೆ ಒತ್ತು ನೀಡಿ ನಾವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಬ್ಯಾರಿ ಸಾಹಿತ್ಯ ಅಕಾಡೆಮಿ ಆ ನಿಟ್ಟಿನಲ್ಲಿ ಸ್ತುತ್ಯ ಕಾರ್ಯ ಮಾಡಿದೆ ಎಂದು ಹೇಳಿದರು.