Public News
ಲಕ್ನೋ: ಸೌಹಾರ್ದತೆಯ ಬೆಳವಣಿಗೆಯೊಂದರಲ್ಲಿ ವಾರಾಣಸಿಯಲ್ಲಿ ಜ್ಞಾನವಾಪಿ ಮಸೀದಿಯನ್ನು ನೋಡಿಕೊಳ್ಳುತ್ತಿರುವ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಯು ಕಾಶಿ ವಿಶ್ವನಾಥ ದೇವಾಲಯಕ್ಕೆ ಒಂದು ಸಾವಿರ ಚದರ ಅಡಿ ಭೂಮಿಯನ್ನು ನೀಡಿದೆ.
ಜ್ಞಾನವ್ಯಾಪಿ ಮಸೀದಿಯ ಆವರಣದಲ್ಲಿ ಉತ್ಖನನ ನಡೆಸಲು ಪ್ರಾಚ್ಯವಸ್ತು ಇಲಾಖೆಗೆ ವಾರಣಾಸಿ ಸಿವಿಲ್ ಕೋರ್ಟ್ ಆದೇಶ ನೀಡಿತ್ತು. ಈ ಆದೇಶ ಹೊರಬಿದ್ದ ಮೂರು ತಿಂಗಳ ನಂತರ, ಮಸೀದಿಯ ಮಂಡಳಿಯು ದೇವಾಲಯಕ್ಕೆ ಜಮೀನು ನೀಡುವ ನಿರ್ಧಾರಕ್ಕೆ ಬಂದಿದೆ. ವಿನಿಮಯದ ಒಪ್ಪಂದದ ಪ್ರಕಾರ, ಪಟ್ಟಣದ ಭಾನ್ಸ್ ಫಟಕ್ ಪ್ರದೇಶದಲ್ಲಿ ದೇವಾಲಯಕ್ಕೆ ಒಂದು ಸಾವಿರ ಚದರ ಅಡಿ ಭೂಮಿಯನ್ನು ವಕ್ಫ್ ಮಂಡಳಿಯು ಬಿಟ್ಟುಕೊಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಒಪ್ಪಂದದಿಂದ ಸುದೀರ್ಘ ಕಾನೂನು ಹೋರಾಟಕ್ಕೆ ತೆರೆಬೀಳಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮಸೀದಿ ಜಾಗದಲ್ಲಿ ಮಂದಿರ ಇತ್ತೇ ಎನ್ನುವುದನ್ನು ತಿಳಿಯಲು ಉತ್ಖನನ ಅನಿವಾರ್ಯ ಎಂದು ಸಿವಿಲ್ ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಮೊಘಲ್ ಚಕ್ರವರ್ತಿಯಾಗಿದ್ದ ಔರಂಗಜೇಜ್, ವಿಶ್ವನಾಥ ಮಂದಿರಕ್ಕೆ ಸೇರಿದ ಜಾಗವನ್ನು ಕಬಳಿಸಿ, ಅತಿಕ್ರಮಣವಾಗಿ ಜ್ಞಾನವ್ಯಾಪಿ ಮಸೀದಿ ನಿರ್ಮಿಸಿದ್ದ. ಹೀಗಾಗಿ ಆ ಜಾಗವನ್ನು ಮಂದಿರಕ್ಕೆ ಬಿಟ್ಟು ಕೊಡಬೇಕೆಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಲೇರಿದ್ದವು.
ವಾರಣಾಸಿ ಸಿವಿಲ್ ಕೋರ್ಟಿನ ಉತ್ಖನನ ಆದೇಶದ ವಿರುದ್ದ ಸುನ್ನಿ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಲೇರಿತ್ತು. "ವಾರಣಾಸಿಯಲ್ಲಿನ ದೇವಾಲಯ ಕಾರಿಡಾರ್ ಯೋಜನೆಗಾಗಿ ದೇವಾಲಯದ ಟ್ರಸ್ಟ್ ಹಲವಾರು ವರ್ಷಗಳ ಹಿಂದೆ ಇದನ್ನು ಕೋರಿತ್ತು" ಎಂದು ಮಸೀದಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.