Public News
ಬೆಂಗಳೂರು: ಮೊಟ್ಟೆ ಹಗರಣದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಭಾಗಿಯಾದ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಹಾವೊಂದು ಮೊಟ್ಟೆ ಕದಿಯುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಅಸಹಾಯಕ, ಬಡ ಮಕ್ಕಳ ಹಾಗೂ ಗರ್ಭಿಣಿ ತಾಯಂದಿರ ಪಾಲಿನ ಮೊಟ್ಟೆಗಳನ್ನು ನುಂಗುವ ವಿಷಜಂತುವಿನಂತಹ ಪಕ್ಷ ಬಿಜೆಪಿ" ಎಂದು ಕಿಡಿಕಾರಿದೆ.
ಮತ್ತೊಂದು ಟ್ವೀಟ್ನಲ್ಲಿ, "ಸತ್ತವರ ಹಣವನ್ನು ಬಿಡದ ಬಿಜೆಪಿ ಬದುಕಿದವರ ಹಣ ಬಿಡುವುದೇ? ನೆರೆ ಸಂತ್ರಸ್ತರ ಪರಿಹಾರ ಹಣವನ್ನು ನುಂಗಿದರು, ಕೊರೊನಾ ಹೆಸರಲ್ಲೂ ಲೂಟಿ ಹೊಡೆದರು. ಈಗ ನಿರ್ಗತಿಕ ಮುಗ್ಧ ಮಕ್ಕಳ ಪೌಷ್ಟಿಕ ಆಹಾರದಲ್ಲೂ ಭ್ರಷ್ಟಾಚಾರ ನಡೆಸಿದ್ದು ಅಕ್ಷಮ್ಯವಾದುದು" ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಸೊರಗಿದ ಮಕ್ಕಳ ಪಾಲಿನ ಮೊಟ್ಟೆ ತಿಂದು ಭ್ರಷ್ಟ ಬಿಜೆಪಿ ಕೊಬ್ಬುತ್ತಿದೆ ಎಂದು ಜರಿದಿರುವ ಕಾಂಗ್ರೆಸ್ #ಮೊಟ್ಟೆಕಳ್ಳಬಿಜೆಪಿ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಗಳ ಮೂಲಕ ಕುಟುಕಿದೆ.
ಕೊರೊನಾ 3ನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂದು ತಜ್ಞರು ಹಲವು ಬಾರಿ ಎಚ್ಚರಿಸಿದರೂ ಬಿಜೆಪಿ ಸರ್ಕಾರ ರಾಜ್ಯದ ಮಕ್ಕಳಿಗೆ ಪೌಷ್ಟಿಕಾಂಶ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಬದಲಾಗಿ ಮಕ್ಕಳ ತಟ್ಟೆಗೇ ಬಾಯಿ ಹಾಕಿ ಮೊಟ್ಟೆಗಳನ್ನ ನುಂಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಸರ್ಕಾರ ಅನ್ನ ಭಾಗ್ಯ ನೀಡಿತ್ತು. ಬಿಜೆಪಿ ಅನ್ನಕ್ಕೆ ಕನ್ನ ಭಾಗ್ಯ ತಂದಿತು. ಕಾಂಗ್ರೆಸ್ ಸರ್ಕಾರ ಮಕ್ಕಳಿಗೆ ಮೊಟ್ಟೆ ಭಾಗ್ಯ ನೀಡಿತ್ತು. ಬಿಜೆಪಿ ಸರ್ಕಾರ ಮಕ್ಕಳ ಪಾಲಿನ ಮೊಟ್ಟೆಯ ಲೂಟಿ ಭಾಗ್ಯ ನೀಡಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ವ್ಯಂಗ್ಯ ಮಾಡಿದೆ.
ಕಳೆದ ಎರಡು ವರ್ಷದಿಂದ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಎಲ್ಲವನ್ನೂ ತಿನ್ನುತ್ತಿದ್ದಾರೆ. ಭೂಮಿ ತಿಂದಿದ್ದಾರೆ, ಹಣ ತಿಂದಿದ್ದಾರೆ, ಕೆರೆ ನುಂಗಿದ್ದಾರೆ. ಈಗ ಮೊಟ್ಟೆ ತಿನ್ನುತ್ತಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ರಾಜೀನಾಮೆ ನೀಡಬೇಕು. ಮೊಟ್ಟೆ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.