Kshetra Samachara
ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ 8 ನೇ ವಾರ್ಡ್ ನಲ್ಲಿ 1.09 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ನಾಲ್ಕು ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.
ಕೋಡಿಕೆರೆ ಮುಖ್ಯ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ., ಶ್ರೀ ಮಹಾಂಕಾಳಿ ದ್ವಾರದಿಂದ ಶ್ರೀ ಮಹಾಂಕಾಳಿ ದೈವಸ್ಥಾನದವರೆಗೆ ಮತ್ತು ಅಡ್ಡರಸ್ತೆ 35 ಲಕ್ಷ ರೂ., ಶ್ರೀ ಮಹಾಂಕಾಳಿ ದ್ವಾರದ ಮುಂಭಾಗದ ರಸ್ತೆ - 20 ಲಕ್ಷ ರೂ, ಎಂಎಸ್ಇ ಝಡ್ ಕಾಲೋನಿ ಶಿವಾಜಿ ನಗರದಲ್ಲಿ ಸಮುದಾಯ ಭವನ 4 ಲಕ್ಷ ರೂ., ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಶಾಸಕರು ಗುದ್ದಲಿ ಪೂಜೆಯನ್ನು ಶನಿವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಬಹುಪಾಲು ಹಣ ವೆಚ್ಚವಾಗಿದೆ. ಮುಖ್ಯಮಂತ್ರಿಗಳಲ್ಲಿ ಮಾಡಿಕೊಂಡ ವಿನಂತಿಯ ಮೇರೆಗೆ ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ಸ್ಥಳೀಯರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ. ಇದರ ಜತೆಗೆ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಅಂದಾಜು 1.50 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿ ನಡೆಯಲಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಈ ಸಂದರ್ಭ ಪಾಲಿಕೆ ಸದಸ್ಯರಾದ ವರುಣ್ ಚೌಟ, ವೇದಾವತಿ, ಬಿಜೆಪಿ ಮುಖಂಡರಾದ ಮತ್ತಿತರರು ಉಪಸ್ಥಿತರಿದ್ದರು.