Public News
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಳವಿಭಾಗಿ ಗ್ರಾಮದ ನಿವಾಸಿ ಕುರಿಗಾಹಿ ಜಮೀನೊಂದರಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಗೆ ಶರಣಾಗಿದ್ದಾರೆ.
ರಘುನಾಥ್ (35) ಆತ್ಮಹತ್ಯೆಗೆ ಶರಣಾದ ಕುರಿಗಾಹಿ. ರಘುನಾಥ್ ತಮಗೆ ಮೂರ್ಛೆ (ಫಿಡ್ಸ್) ಕಾಯಿಲೆ ಇದ್ದು ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈ ಕಾಯಿಲೆಯು ಮಳೆಗಾಲ, ಚಳಿಗಾಲದಲ್ಲಿ ವಿಪರೀತ ಹೆಚ್ಚಾಗುತ್ತಿತ್ತು. ಕುರಿ ಮೇಯಿಸಲು ಹೋದಾಗ ಅನೇಕ ಬಾರಿ ಫಿಡ್ಸಿ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಮನನೊಂದು ತನ್ನ ಬಳಿ ಇದ್ದ ಟವಲ್ ಮತ್ತು ಮೇಕೆ ಕಟ್ಟುವ ಸಣ್ಣ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾರೆ.
ರಘುನಾಥ್ ಮೂಲತಃ ಬರುಡುಕುಂಟೆ ಗ್ರಾಮದವರಾಗಿದ್ದು, ಕಳವಿಭಾಗಿ ಗ್ರಾಮದಲ್ಲಿ ಕಳೆದ ಹದಿನೈದು ವರ್ಷಗಳಿಂದ ಕುರಿಕಾಯುತ್ತಿದ್ದರು. ರಘುನಾಥ್ ಅವರ ಸಾವಿನಿಂದ 25 ವರ್ಷದ ಪತ್ನಿ ಮಮತಾ, 5 ವರ್ಷದ ಅಮೃತ, ಮೂರು ವರ್ಷದ ಮಗಳು ನದಿಯಾ ಅನಾಥರಾಗಿದ್ದಾರೆ. ಬಡತನದಲ್ಲಿ ಕುರಿಕಾಯುತ್ತಿದ್ದ ರಘು ಸಾವು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಸ್ಥಳಕ್ಕೆ ಐಮಂಗಲ ಸಬ್ ಇನ್ಸ್ಪೆಕ್ಟರ್ ಗಳಾದ ಮಂಜುನಾಥ್, ಅಶ್ವಿನಿ ಆಗಮಿಸಿ ತನಿಖೆ ನಡೆಸಿದ್ದು, ಸಣ್ಣ ವಯಸ್ಸಿನಲ್ಲಿ ಗಂಡನ ಕಳೆದುಕೊಂಡ ಪತ್ನಿ, ಪುಟ್ಟ ಮಕ್ಕಳಿಗೆ ಮುಂದಿನ ಜೀವನಕ್ಕೆ ಆಸರೆಯಾಗಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತಹಶೀಲ್ದಾರರು ಕುಟುಂಬಕ್ಕೆ ನೆರವಾಗಬೇಕು ಎಂದು ಕಳವಿಭಾಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.