Kshetra Samachara
ಮುಲ್ಕಿ: ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವಾಗುವಾಗ ಆಟೋ ನಿಲ್ದಾಣದ ಬಳಿ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣಗೊಂಡ ನೂತನ ಬಸ್ಸು ನಿಲ್ದಾಣ ಕಸದ ಕೊಂಪೆಗಳಿಂದ ಕೂಡಿದ್ದು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದೆ.
ಮಂಗಳೂರಿನಿಂದ ಕಿನ್ನಿಗೋಳಿ ಕಡೆಗೆ ಹೋಗುವ ಸರ್ವಿಸ್ ಬಸ್ಸುಗಳು ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ರಿಕ್ಷಾ ನಿಲ್ದಾಣದ ಬಳಿ ಇರುವ ನಿರ್ಜನ ಬಸ್ಸು ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದಾರೆ.
ಆದರೆ ನಿಲ್ದಾಣದ ಸುತ್ತಲೂ ಹಾಗೂ ಹೆದ್ದಾರಿ ಬದಿಯ ಸರ್ವಿಸು ರಸ್ತೆಯಲ್ಲಿ ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನಿಂತು ಕೆಸರುಮಯವಾಗಿದ್ದು ಮಳೆ ನೀರಿನಲ್ಲಿ ಕಸ ತ್ಯಾಜ್ಯ ತುಂಬಿಕೊಂಡಿದ್ದು ಪ
ಪ್ರಯಾಣಿಕರಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಇದೇ ರೀತಿ ಹಳೆಯಂಗಡಿ ಜಂಕ್ಷನ್ ಬಳಿ ಹಳೆಯಂಗಡಿ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಗೆ ಕೃತಕ ಕೆರೆ ಸೃಷ್ಟಿಯಾಗಿದ್ದು ಚರಂಡಿ ವ್ಯವಸ್ಥೆ ಇಲ್ಲದೆ ಅಪಾಯಕಾರಿಯಾಗಿ ಪರಿಣಮಿಸಿದೆ.
ತಂಗುದಾಣದಲ್ಲಿ ಬಿಕ್ಷುಕರ ಕಾಟ ಅತಿಯಾಗಿದ್ದು ಗಲೀಜು ಮಯ ವಾತಾವರಣದಿಂದ ಹಾಗೂ ರಾತ್ರಿ ಹೊತ್ತು ಹೆದ್ದಾರಿಯಲ್ಲಿ ದಾರಿದೀಪದ ಅವ್ಯವಸ್ಥೆಯಿಂದ ತಂಗುದಾಣದಲ್ಲಿ ಕುಳಿತುಕೊಳ್ಳಲು ಹೆದರಿಕೆಯಾಗುತ್ತಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.
ಕೂಡಲೇ ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತು ತಂಗುದಾಣದ ಸುತ್ತಲೂ ಇರುವ ಕಸಕಡ್ಡಿ ತ್ಯಾಜ್ಯಗಳನ್ನು ತೆರವುಗೊಳಿಸಿ ಹಾಗೂ ಹಳೆಯಂಗಡಿ ಜಂಕ್ಷನ್ ಬಳಿ ಹಳೆಯಂಗಡಿ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಬದಿಯಲ್ಲಿ ಸೂಕ್ತ ಚರಂಡಿ ನಿರ್ಮಿಸಿ ವ್ಯವಸ್ಥಿತ ತಂಗುದಾಣ ವನ್ನಾಗಿ ರೂಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.