Kshetra Samachara
ಕಾವೂರು: ಮಂಗಳೂರು ಉತ್ತರ ಮಂಡಲ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆ ಕಾವೂರು ಬಿಜೆಪಿ ಕಚೇರಿಯಲ್ಲಿ ಶನಿವಾರ ಜರಗಿತು.
ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಕಾರ್ಯಕಾರಿಣಿ ಉದ್ಘಾಟಿಸಿ, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಎಲ್ಲರಿಗೂ ಅವಕಾಶ ಲಭಿಸುತ್ತದೆ. ಪಕ್ಷದ ಮೇಲೆ ನಿಷ್ಟೆಯಿಟ್ಟು ನಾವು ಪಕ್ಷದ ಹಿತಕ್ಕಾಗಿ ಕೆಲಸ ಮಾಡಿದಾಗ ನಾಯಕರು ಇದನ್ನು ಗುರುತಿಸಿ ಪಕ್ಷ ಸಂಘಟನೆ ಜವಾಬ್ದಾರಿ ಜತೆಗೆ ಸ್ಥಳೀಯ ಚುನಾವಣಾ ಕಣಕ್ಕೂ ಇಳಿಸಲು ಸೂಚಿಸಬಹುದು. ಬಿಜೆಪಿ ಇತರ ಪಕ್ಷಗಳಂತೆ ಅಲ್ಲ. ಹುದ್ದೆಯನ್ನು ನಿರೀಕ್ಷಿಸದೇ ಕಾರ್ಯಕರ್ತರು ನಿಸ್ವಾರ್ಥವಾಗಿ ಶ್ರಮಿಸಿದ್ದರಿಂದ ಇಂದು ಬಲಿಷ್ಟವಾಗಿ ಕೇಂದ್ರ, ರಾಜ್ಯ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರಕ್ಕೆ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಬಾಲ ನಟಿಯನ್ನು ಗೌರವಿಸಲಾಯಿತು. ಆಟಿ ತಿಂಗಳ ಪ್ರಯುಕ್ತ ಪೌಷ್ಟಿಕಾಂಶ ಯುಕ್ತ ಆಹಾರ ತಿಂಡಿ ತಿನಿಸುಗಳ ವಿಶೇಷ ಕಾರ್ಯಕ್ರಮವನ್ನು ಶಾಸಕರು ಉದ್ಘಾಟಿಸಿದರು.
ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ದಕ್ಷಿಣ ಕನ್ನಡ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಕಾರ್ಯದರ್ಶಿ ಪೂಜಾ ಪೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೇವಂತಿ ಶ್ರೀಯಾನ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಪೂರ್ಣಿಮಾ,
ರೂಪಾ ಧರ್ಮಯ್ಯ, ಮಂಗಳೂರು ಉತ್ತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕುಶಲ ವಿಶು ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ವೀಣಾ ನಾಯಕ್, ಅರುಣಾ ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.