Public News
ಬೆಳಗಾವಿ: ಸಿಎಂ ಬದಲಾವಣೆ ಇದು ಮಾಧ್ಯಮಗಳ ಸೃಷ್ಟಿಯಿದೆ. ಅಧಿಕೃತವಾಗಿ ನಮ್ಮ ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ ಅದಕ್ಕೆ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿ ಇರ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ.
ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರವಾಹ ತಗ್ಗಿಸಲು ಇಂದಿನಿಂದ ಆಲಮಟ್ಟಿ ಜಲಾಶಯದಿಂದ 3 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಹೊರಗೆ ಬಿಡಲು ಸೂಚನೆ ನೀಡಲಾಗಿದೆ. ನದಿ ಪಾತ್ರ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಕಾಂಗ್ರೆಸ್ ಶಾಸಕ ನಿಯೋಗ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಖಾಲಿ ಕುಂತಾರ್ ಅದಕ್ಕೆ ಏನಾದರೂ ಹೇಳಬೇಕಲ್ಲ. ಅವರು ಅಸ್ತಿತ್ವದ ಸಲವಾಗಿ ಏನಾದರೂ ಹೇಳಬೇಕಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಟಾಂಗ್ ನೀಡಿದರು.
ಬೆಳಗಾವಿಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಮಳೆಯಿಂದ 47 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಪ್ರವಾಹದಿಂದ 5 ತಾಲೂಕಿನ 51 ಗ್ರಾಮಗಳಿಗೆ ತೊಂದರೆ ಆಗಿದೆ. 26 ಕಾಳಜಿ ಕೇಂದ್ರ ಆರಂಭಿಸಲಾಗಿದ್ದು, 2 ಸಾವಿರ ಜನ ಇದ್ದಾರೆ. ಎರಡು ಎನ್ ಡಿ ಆರ್ ಎಫ್ ತಂಡ ಜಿಲ್ಲೆಯಲ್ಲಿ ಇವೆ. 224 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಜಿಲ್ಲೆಯಲ್ಲಿ 36 ಸೇತುವೆ ಮುಳುಗಡೆಯಾಗಿವೆ. ಜನರಿಗೆ ಸುರಕ್ಷಿತ ಸ್ಥಳಗಳಿಗೆ ಹೋಗಲು ಸಾರ್ವಜನಿಕರಿಗೆ ಮನವಿ ಮಾಡಿದ ಕಾರಜೋಳ ಅವರು ತಿಳಿಸಿದರು.