Kshetra Samachara
ಸುರತ್ಕಲ್ : ಸುರತ್ಕಲ್ ಈಗ ಪಟ್ಟಣ ಪ್ರದೇಶವಾಗಿ ಬೆಳೆದಿದೆ. ಆದರೆ ಸುರತ್ಕಲ್ ಭಾಗದಲ್ಲಿ ಹಲವು ಸಮಯಗಳಿಂದ ಒಂದು ವರ್ಗದ ಜನರು ಭಿಕ್ಷಾಟನೆ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆಯನ್ನು ನೀಡುತ್ತಿದ್ದಾರೆ. ಇದರ ಬಗ್ಗೆ ಹಲವಾರು ಬಾರಿ ಆಪತ್ಭಾಂಧವ ಸಮಾಜ ಸೇವಾ ಸಂಘ(ರಿ.) ಸುರತ್ಕಲ್ ವಿವಿಧ ಇಲಾಖೆಗಳ ಗಮನಕ್ಕೆ ತಂದಿದ್ದರೂ ಅದರ ಬಗ್ಗೆ ಯಾವುದೇ ತರಹದ ಕ್ರಮ ಕೈಗೊಂಡಿಲ್ಲ.
ಸುರತ್ಕಲ್ ನಲ್ಲಿ ಹಲವಾರು ದಾನಿಗಳ ನೆರವಿನಿಂದ ಫ್ಲೈ ಓವರ್ ಅಡಿಯನ್ನು ಸ್ವಚ್ಛ ಭಾರತದ ಯೋಜನೆಯಡಿಯಲ್ಲಿ "ಸ್ವಚ್ಛ ಸುರತ್ಕಲ್" ಎಂಬ ಯೋಜನೆಯೊಂದಿಗೆ ನಿರ್ಮಿಸಲಾಗಿದ್ದ ಫ್ಲೈ ಓವರ್ ಅಡಿಯಲ್ಲಿ ದಿನನಿತ್ಯ ಭಿಕ್ಷಕರು ಅಲ್ಲೇ ಕುಡಿದು, ಊಟೋಪಾಚರ ಅಲ್ಲದೇ ಅನೈತಿಕ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ. ಇದು ಜನಸಾಮಾನ್ಯರಿಗೆ ಬಹಳಷ್ಟು ಮುಜುಗರ ತರುವಂತಹದಾಗಿದೆ.
ಅಲ್ಲದೇ ಫ್ಲೈ ಓವರ್ ನ ಅಂದಗೆಡಿಸುತ್ತಿದ್ದಾರೆ. ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ಮನಗಂಡು ಆಪತ್ಭಾಂಧವ ಸಮಾಜ ಸೇವಾ ಸಂಘ(ರಿ.) ಸುರತ್ಕಲ್ ಇದರ ವತಿಯಿಂದ ದ.ಕ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಸುರತ್ಕಲ್ ಫ್ಲೈ ಓವರ್ ಪರಿಸ್ಥಿತಿ ಹಾಗೂ ಭಿಕ್ಷಾಟನೆಯ ಕುರಿತು ಅವರಿಗೆ ಮನವಿಯ ಮೂಲಕ ತಿಳಿಸಲಾಯಿತು.
ತಕ್ಷಣ ಅವರುಗಳನ್ನು ಭಿಕ್ಷಾಟನೆಯಿಂದ ಮುಕ್ತಿಗೊಳಿಸುವಂತೆ ಮನವಿ ಸಲ್ಲಿಸಲಾಯಿತು. ಮನವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಪತ್ಭಾಂಧವ ಸಮಾಜ ಸೇವಾ ಸಂಘ(ರಿ.) ಸುರತ್ಕಲ್ ಸ್ಥಾಪಕಧ್ಯಕ್ಷ ಉಮೇಶ್ ದೇವಾಡಿಗ ಇಡ್ಯಾ, ಸಂಘಟನಾ ಕಾರ್ಯದರ್ಶಿ ಸರೋಜ ತಾರನಾಥ್ ಶೆಟ್ಟಿ ಕಟ್ಲ, ಸುರೇಂದ್ರ ಆಚಾರ್ಯ, ಲಕ್ಷ್ಮೀ ಹೇಮಂತ್ ಹೊಸಬೆಟ್ಟು, ಮಾಜಿ ಸೈನಿಕ ಲೀಲಾಧರ್ ಕಡಂಬೋಡಿ ಉಪಸ್ಥಿತರಿದ್ದರು.