Public News
ಮುಂಬೈ: ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣ ಭಾಗದಲ್ಲಿ ಭಾರಿ ಮಳೆ ಸುರಿದಿದ್ದು, 48 ಗಂಟೆಗಳಲ್ಲಿ 130ಕ್ಕೂ ಅಧಿಕ ಮಂದಿ ಮೃತಪಟ್ಟು ನೂರಾರು ಜನರು ನಾಪತ್ತೆಯಾಗಿದ್ದಾರೆ. ರಾಯಗಢ ಜಿಲ್ಲೆಯ ತಲಾಯಿ ಗ್ರಾಮದಲ್ಲಿ ಭೂಕುಸಿತದಿಂದ 43 ಜನ ಸಾವಿಗೀಡಾಗಿದ್ದಾರೆ. ಹಲವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.
ರಾಯಗಢ, ರತ್ನಗಿರಿ ಜಿಲ್ಲೆಗಳಲ್ಲಿ ಹಳ್ಳಿಗಳಿಗೆ ಸಂರ್ಪಕ ಕಡಿತಗೊಂಡಿದೆ. 24 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಇನ್ನೊಂದು ಕಡೆ ಸಂಭವಿಸಿದ ಭೂಕುಸಿತದಲ್ಲಿ ನಾಲ್ಕು ಶವಗಳು ದೊರೆತಿವೆ. ಮತ್ತೊಂದು ಅನಾಹುತದ ಸ್ಥಳದಲ್ಲಿ 30 ಜನರು ಅವಶೇಷದಡಿ ಸಿಲುಕಿರುವ ಶಂಕೆ ಇದೆ. ಸತಾರಾ ಜಿಲ್ಲೆಯ ಮಿರಗಾಂವ್ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 12 ಮೃತಪಟ್ಟಿದ್ದಾರೆ. ಇದೇ ಜಿಲ್ಲೆಯ ಅಂಬೆಗರ್ ನ ಅವಶೇಷದಲ್ಲಿ 12 ಜನರು ಸಿಲುಕಿರುವ ಶಂಕೆ ಇದೆ.
ಮುಂಬೈನ ಗೋವಾನಂದಿ ಪ್ರದೇಶದಲ್ಲಿ ಮನೆ ಕುಸಿತದ ಪರಿಣಾಮ 4 ಮಂದಿ ಮೃತಪಟ್ಟಿದ್ದಾರೆ. ಏಳು ಮಂದಿಗೆ ಗಾಯವಾಗಿದೆ.
ಕೊಲ್ಹಾಪುರ ಜಿಲ್ಲೆಯಲ್ಲಿ ನದಿ ಪ್ರವಾಹಕ್ಕೆ ಇಬ್ಬರು ಕೊಚ್ಚಿ ಹೋಗಿದ್ದಾರೆ. ಭೂ, ವಾಯು ಮತ್ತು ನೌಕಾ ಪಡೆಯ ಹೆಲಿಕಾಪ್ಟರ್ ಗಳು, ಯೋಧರ ತಂಡ, ಸ್ಥಳೀಯ 12 ರಕ್ಷಣಾ ತಂಡ, ಕರಾವಳಿ ಭದ್ರತಾ ಪಡೆಯ ಎರಡು, ಎನ್ ಡಿಆರ್ ಎಫ್ ನ ಮೂರು ತಂಡಗಳು ರಾಜ್ಯದಲ್ಲಿ ಪರಿಹಾರ ಕಾರ್ಯ ಕೈಗೊಂಡಿವೆ. ಮಹಾರಾಷ್ಟ್ರದಲ್ಲಿ ಈ ಜುಲೈನಲ್ಲಿ ಕಳೆದ ನಾಲ್ಕು ದಶಕದಲ್ಲೇ ಅತ್ಯಧಿಕ ಮಳೆಯಾಗಿದೆ ಎಂದಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ರಾಜ್ಯದ ಹಲವೆಡೆ ರೆಡ್ ಅಲರ್ಟ್ ಘೋಷಿಸಿದೆ.