Kshetra Samachara
ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಹೊನ್ನಕಟ್ಟೆ ಗ್ರಾಮಸಂಘ ಬಳಿಯ ಮಿತ್ತೋಟ್ಟು ಕಾಲನಿ ಎಂಬಲ್ಲಿ ಕಳೆದ ದಿನಗಳ ಹಿಂದೆ ಸುಮತಿ (40) ಎಂಬ ಮಹಿಳೆಯ ಮನೆಗೆ ಸಿನಿಮೀಯ ಮಾದರಿಯಲ್ಲಿ ಹಾಡುಹಗಲೇ ನುಗ್ಗಿ 32 ಗ್ರಾಮ್ ನ ಚಿನ್ನದ ಕರಿಮಣಿ ಸರ ದರೋಡೆ ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಶಿವಮೊಗ್ಗ ಮೂಲದ ಸುರತ್ಕಲ್ ಕೃಷ್ಣಾಪುರ ಹಿಲ್ ಸೈಡ್ ನಿವಾಸಿ ವಿನಯ ಕುಮಾರ್ (35) ಹಾಗೂ ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಮಣಿ (35) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಚಿನ್ನದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ. ವಿಶೇಷವೆಂದರೆ ಆರೋಪಿಗಳಿಬ್ಬರು ಮಹಿಳೆಯ ಸಂಬಂಧಿಕರಾಗಿದ್ದಾರೆ.
ಆರೋಪಿ ವಿನಯ ಕುಮಾರ್ ಕೃತ್ಯದ ಸೂತ್ರಧಾರನಾಗಿದ್ದ. ಬಾರ್ ಬೆಂಡರ್ ಕೆಲಸ ಮಾಡುತ್ತಿದ್ದ ತನ್ನ ಸಂಬಂಧಿಯಾದ ಮಣಿ ಜತೆಗೆ ಮೊದಲ ಮಹಡಿಯಲ್ಲಿದ್ದ ಮಾವನ ಮನೆಗೆ ತೆರಳಿ ದರೋಡೆ ನಡೆಸಲು ಮಣಿಯನ್ನು ಮನೆಯೊಳಗೆ ಕಳುಹಿಸಿದ್ದು ಈ
ಹೊರಗೆ ಕೆಳಭಾಗದಲ್ಲಿ ನಿಂತಿದ್ದ, ಚಿನ್ನದ ಸರ ಈತ 12 ಸಾವಿರ ರೂ.ಗೆ ಅಡವಿರಿಸಿದ್ದು ಇದರಲ್ಲಿ ಮಣಿಗೆ 5 ಸಾವಿರ ರೂ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಕಳೆದ ದಿನಗಳ ಹಿಂದೆ ಹಾಡು ಹಗಲೇ ನಡೆದ ಈ ದರೋಡೆ ಕೃತ್ಯ ಭಾರೀ ಕುತೂಹಲ ಮೂಡಿಸಿತ್ತು ಅಲ್ಲದೆ ದರೋಡೆ ನಡೆದ ಕೂಡಲೇ ಸ್ಥಳೀಯರು 100 ಕ್ಕೆ ತುರ್ತು ಕರೆ ನೀಡಿದ ಕಾರಣ ಸ್ಥಳಕ್ಕೆ ಮೇಲಧಿಕಾರಿಗಳೂ ಧಾವಿಸಿದ್ದರು. ಮಹಿಳೆ ದರೋಡೆಗೆ ಪ್ರತಿರೋಧ ಒಡ್ಡಿ ದರೋಡೆಕೋರನ ಕೈಗೆ ಕಚ್ಚಿದ ಕಾರಣ ಆತ ಅರ್ಧ ಭಾಗ ಚಿನ್ನದ ಕರಿಮಣಿ ಮಾತ್ರ ಎಳೆಯುವಲ್ಲಿ ಸಫಲನಾಗಿದ್ದನು.
ಕ್ಷಿಪ್ರಗತಿಯಲ್ಲಿ ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳ ಸೆರೆ ಹಿಡಿದ ಸುರತ್ಕಲ್ ಠಾಣಾಧಿಕಾರಿ ಚಂದ್ರಪ್ಪ, ತಂಡದ ಕಾರ್ಯವನ್ನುಮೇಲಧಿಕಾರಿಗಳು ಶ್ಲಾಘಿಸಿದ್ದಾರೆ.