Kshetra Samachara
ಬೆಂಗಳೂರು(ಫೆ.19): ವಿಶ್ವಪ್ರಸಿದ್ಧ, ಬೆಂಗಳೂರಿನ ಹೆಮ್ಮೆ ಎನಿಸಿಕೊಂಡಿರುವ ಪ್ರತಿಷ್ಠಿತ ಬೆಂಗಳೂರು ಏರ್ ಶೋ ನಾಳೆ(ಫೆ.20) ಉದ್ಘಾಟನೆಗೊಳ್ಳಲಿದೆ. ಯಲಹಂಕ ವೈಮಾನಿಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ಶೋಗೆ ಭಿಗಿ ಭದ್ರತೆ ಒದಗಿಸಲಾಗಿದೆ. ಪುಲ್ವಾಮ ದಾಳಿಯಿಂದಾಗಿ ಸಂಪೂರ್ಣ ಏರ್ ಶೋ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಲೋಹದ ಹಕ್ಕಿಗಳ ಹಾರಾಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಫೆ.20 ರಿಂದ 24ವರೆಗೆ ನಡೆಯಲಿರುವ ಏರ್ ಶೋನಲ್ಲಿ 31 ವಿಮಾನಗಳು ಆಗಸದಲ್ಲಿ ಚಿತ್ತಾರ ಮೂಡಿಸಲಿದೆ. ಬೆಳಗ್ಗೆ 10 ರಿಂದ 12ರ ವರೆಗೆ ಮೊದಲ ಭಾಗ ಹಾಗೂ ಮಧ್ಯಾಹ್ನ 2 ರಿಂದ ಸಂಜೆ 5ರ ವರೆಗೆ ಎರಡನೇ ಭಾಗದ ವೈಮಾನಿ ಪ್ರದರ್ಶನ ನಡೆಯಲಿದೆ. ದೇಶಿ ಹಾಗೂ ವಿದೇಶಿ ವಿಮಾನಗಳು ಹಾರಾಟ ನಡೆಸಲಿದೆ.
ಸುಖೋಯ್ ಸು 30 ಫೈಟರ್ ಜೆಟ್, ಫ್ರೆಂಚ್ ಫೈಟರ್ ಏರ್ಕ್ರಾಫ್ಟ್ ರಾಫೆಲ್, ಬ್ರಿಟನ್ ಮೂಲದ ಯಕೋಲ್ವ್ಸ್, ಭಾರತೀಯ ಸೇನೆಯ ಧ್ರುವ ಹೆಲಿಕಾಪ್ಟರ್, ಭಾರತೀಯ ವಾಯು ಸೇನೆಯ ಸೂರ್ಯಕಿರಣ, ತೇಜಸ್ ಏರ್ಕ್ರಾಫ್ಟ್ ವಿಮಾನಗಳು ಈ ಭಾರಿಯ ಏರೋ ಇಂಡಿಯಾ ಶೋನಲ್ಲಿನ ಪ್ರಮುಖ ಹೈಲೈಟ್ಸ್.
ಸುಂದರ ಏರ್ ಶೋ ಹಾರಾಟ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಬೆಂಗಳೂರು ಏರ್ಶೋ ಟಿಕೆಟ್ ಖರೀದಿಸಿ ಲೋಹದ ಹಕ್ಕಿಗಳ ಹಾರಾಟ ವೀಕ್ಷಿಸಬಹುದಾಗಿದೆ. ಆನ್ಲೈನ್ ಮೂಲಕ ಬುಕ್ ಮಾಡ ಬಯಸುವವರು ಬುಕ್ಮೈ ಶೋ(bookmyshow)ಮೂಲಕ ಟಿಕೆಟ್ ಖರೀದಿಸಬಹುದು. ಇನ್ನು ಭದ್ರತೆ ದೃಷ್ಟಿಯಿಂದ ಡ್ರೋನ್ ಕ್ಯಾಮಾರ ನಿಷೇಧಿಸಲಾಗಿದೆ. ಇಷ್ಟೇ ಅಲ್ಲ ಬಲೂನ್ಗಳನ್ನೂ ನಿಷೇಧಿಸಲಾಗಿದೆ.
ಯಲಹಂಕ ವಾಯುನೆಲೆ ಹೈವೇ ಬದಿಗಳಲ್ಲಿ ವಾಹನಗಳನ್ನ ಪಾರ್ಕ್ ಮಾಡುವುದು ಕೂಡ ನಿಷೇಧಿಸಲಾಗಿದೆ. ಮೇಕ್ರಿ ಸರ್ಕಲ್, ಹೆಬ್ಬಾಳ ಫ್ಲೈ ಓವರ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಯಲಹಂಕ ವೈಮಾನಿ ವಾಯುನೆಲೆಗೆ ತೆರಳುವ ಮಾರ್ಗಗಳನ್ನ ಡೈವರ್ಟ್ ಮಾಡಲಾಗುವುದು. ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆವರೆಗೆ ಈ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗುವುದು ಎಂದು ನಗರ ಪೊಲೀಸ್ ಕಮೀಶನರ್ ಟಿ ಸುನೀಲ್ ಕುಮಾರ್ ಹೇಳಿದ್ದಾರೆ.
ಏರ್ ಶೋ ಕಾರಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳೋ ವಿಮಾನಗಳ ಸಮಯ ಬದಲಾವಣೆಯಾಗಲಿದೆ. 1996ರಲ್ಲಿ ಮೊದಲ ಬಾರಿಗೆ ಯಲಹಂಕಾ ವಾಯುನೆಲಯಲ್ಲಿ ಏರ್ ಶೋ ಆಯೋಜಿಸಲಾಗಿತ್ತು. ಇದೀಗ 11 ಆವೃತ್ತಿಗಳನ್ನ ಯಶಸ್ವಿಯಾಗಿ ಪೂರೈಸಿರುವ ಬೆಂಗಳೂರು ಏರ್ ಶೋ ಇದೀಗ 12ನೇ ಆವೃತ್ತಿಗೆ ಸಜ್ಜಾಗಿದೆ. ಆದರೆ ಏರ್ ಶೋ ಆರಂಭಕ್ಕೂ ಮುನ್ನವೇ ತಾಲೀಮು ನಡೆಸುತ್ತಿದ್ದ ಎರಡು ಸೂರ್ಯಕಿರಣ ಲಘು ವಿಮಾನಗಳು ಅಪಘಾತಕ್ಕೀಡಾಗಿರುವುದು ಆತಂತಕ್ಕೆ ಕಾರಣವಾಗಿದೆ.