Public News
ಚಿಕ್ಕಮಗಳೂರು (ಫೆ.19): ಶಾಸಕ ಸಿಟಿ ರವಿ ಅವರೇ ಕುಡಿದು ಕಾರು ಚಲಾಯಿಸಿದ್ದರು. ಇದರ ಪರಿಣಾಮವಾಗಿಯೇ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಕುಣಿಗಲ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮೃತರ ಸಂಬಂಧಿಗಳ ಆರೋಪವನ್ನು ಅವರ ಶಾಸಕರ ಹೆಂಡತಿ ಪಲ್ಲವಿ ನಿರಾಕರಿಸಿದ್ದಾರೆ.
ಸಿಟಿ ರವಿ ಮದ್ಯ ಸೇವಿಸಿದ್ದಾರೆ ಎಂಬುದು ಶುದ್ಧ ಸುಳ್ಳು. ನನ್ನ ಗಂಡ ಕಾಫಿಯನ್ನೇ ಕುಡಿಯುವುದಿಲ್ಲ ಇನ್ನು ಮದ್ಯ ಹೇಗೆ ಸೇವಿಸುತ್ತಾರೆ. ರವಿ ಕುಡಿದು ಗಾಡಿ ಚಲಾಯಿಸುತ್ತಿದ್ದರು ಎಂಬ ಸುದ್ದಿ ಕೇಳಿ ಶಾಕ್ ಆಯ್ತು ಎಂದು ಆತಂಕ ವ್ಯಕ್ತಪಡಿಸಿದರು. ಅವರು ನೀರು ಬಿಟ್ಟು ಬೇರೆದನ್ನು ಕುಡಿದಿದ್ದು ನಾನು ಕಂಡಿಲ್ಲ ಎಂದರು
ಅವರಿಗೆ ಚೆನ್ನೈನಲ್ಲಿ ಮೀಟಿಂಗ್ ಇತ್ತು. ಮಂಗಳವಾರ ಬೆಳಗ್ಗೆ 6ಗಂಟೆಗೆ ಪ್ಲೈಟ್ ಬುಕ್ ಆಗಿತ್ತು. ಅದಕ್ಕಾಗಿ ಮಧ್ಯರಾತ್ರಿ 12ಕ್ಕೆ ಅವರು ಮನೆ ಬಿಟ್ಟಿದ್ದರು. ಡ್ರೈವರ್ ಕಾರು ಚಲಾಯಿಸಿದ್ದ. ಅವರು ಕಾರು ಚಲಾಯಿಸುವುದನ್ನು ಬಿಟ್ಟು ಹಲವು ವರ್ಷ ಆಗಿದೆ. ಅವರಿಗೆ ಡ್ರೈವಿಂಗ್ ಮರತೆ ಹೋಗಿದೆ ಎಂದು ಸಮಾಜಾಯಿಷಿ ನೀಡಿದರು.
ಅಪಘಾತದಿಂದ ಇಬ್ಬರು ಸಾವನ್ನಪ್ಪಿದಕ್ಕೆ ಬೇಸರವಿದೆ. ನಿಜಕ್ಕೂ ಈ ರೀತಿ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಸ್ಥರ ಮನೆಗೆ ಹೋಗಿ ಸಾಂತ್ವಾನ ಹೇಳುತ್ತೇನೆ ಎಂದರು.
ಘಟನೆ ಕುರಿತು ಮಾತನಾಡಿದ ಸಿಟಿ ರವಿ, ನಿನ್ನೆ ಶಿವಮೊಗ್ಗದಲ್ಲಿ ಕಾರ್ಯಕ್ರಮದ ಬಳಿಕ ಇಂದು ಚೆನ್ನೈನಲ್ಲಿನ ಕಾರ್ಯಕ್ರಮಕ್ಕೆ ಹೊರಡಲು ಸಿದ್ದವಾಗಿದೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ವಿಶ್ರಾಂತಿಯಲ್ಲಿದ್ದ ಆಕಾಶ್ ಎಂಬ ಡ್ರೈವರ್ ಜೊತೆ ಹೊರಟೆ. ಕಾರು ಚಲಿಸಲು ಪ್ರಾರಂಭಿಸಿದಂತೆ ಕಾರಿನಲ್ಲಿ ಹಿಂದೆ ಕುಳಿತು ಮಲಗಿದ್ದೆ. ಅಲ್ಲದೇ ಕಾರನ್ನು 100 ಕಿ.ಮೀ ಒಳಗೆ ಓಡಿಸುವಂತೆ ಕೂಡ ಡ್ರೈವರ್ಗೆ ತಿಳಿಸಿದ್ದೆ. ಕಾರಿನಲ್ಲಿ ಶಬ್ದ ಬಂದಾಗ ಕಣ್ಣು ಬಿಟ್ಟು ನೋಡಿದೆ. ಏರ್ ಬ್ಯಾಗ್ಗಳು ತೆರೆದುಕೊಂಡಿದ್ದವು. ಕಾರು ಬಾಗಿಲು ಕೂಡ ಜಾಮ್ ಆಗಿತ್ತು. ಈ ರೀತಿ ಘಟನೆ ನಡೆದಿದ್ದು ದುರಾದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಹೋಗಿ ಸಮಾಧಾನ ಮಾಡುವುದಾಗಿ ಕೂಡ ತಿಳಿಸಿದ್ದಾರೆ.