Public News
ಪುಲ್ವಾಮ ದಾಳಿಯ ನಂತರ ಕೇಂದ್ರ ಸರಕಾರವು ಕಾಶ್ಮೀರದಲ್ಲಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟ ಬೆನ್ನಲ್ಲೇ ಸೇನೆ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ಕಾಶ್ಮೀರದಲ್ಲಿ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ನಾಯಕತ್ವವನ್ನು ಬಡಮೇಲು ಮಾಡಲಾಗಿದೆ. ಪುಲ್ವಾಮ ಘಟನೆ ನಡೆದು 100 ಗಂಟೆಯೊಳಗಾಗಿಯೇ ಭಾರತೀಯ ಸೇನೆ ಇಂಥದ್ದೊಂದು ಸಾಧನೆ ಮಾಡಿದೆ. ನಿನ್ನೆ ಉಗ್ರರೊಂದಿಗೆ ಸುದೀರ್ಘ 16 ಗಂಟೆ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಜೈಷೆ ಉಗ್ರರನ್ನು ಸೈನಿಕರು ಹತ್ಯೆಗೈದಿದ್ದರು. ಈ ಮುವರೂ ಕೂಡ ಕಾಶ್ಮೀರದಲ್ಲಿ ಜೈಷೆ ಸಂಘಟನೆಯ ನೇತೃತ್ವ ವಹಿಸಿದ್ದವರೆನ್ನಲಾಗಿದೆ. ಕಾಶ್ಮೀರದಲ್ಲಿ ಜೈಷೆ ಸಂಘಟನೆಯ ಇಡೀ ನಾಯಕತ್ವವನ್ನೇ ನಾಶ ಮಾಡಿರುವುದಾಗಿ ಭಾರತೀಯ ಸೇನಾಧಿಕಾರಿ ಕನ್ವಲ್ ಜೀತ್ ಸಿಂಗ್ ಧಿಲ್ಲೋನ್ ಅವರು ಇವತ್ತು ತಿಳಿಸಿದರು. ಜಮ್ಮು-ಕಾಶ್ಮೀರದ ಪೊಲೀಸ್ ಹಾಗೂ ಸಿಆರ್ಪಿಎಫ್ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೆಜೆಎಸ್ ಧಿಲ್ಲೋನ್ ಈ ಮಾಹಿತಿ ಪ್ರಕಟಿಸಿದರು.
ಕಾಶ್ಮೀರದಲ್ಲಿ ಉಗ್ರರ ಬೇರು ಕೀಳುವ ಕೆಲಸ ಮಾಡುತ್ತಿರುವ ಭದ್ರತಾ ಪಡೆಗಳು ಉಗ್ರ ಆಕಾಂಕ್ಷಿಗಳಿಗೆ ಕಟು ಎಚ್ಚರಿಕೆಯನ್ನೂ ನೀಡಿದರು. ಯಾರಾದರೂ ಗನ್ ಎತ್ತಿಕೊಂಡರೆ ಅವರನ್ನು ಕೊಂದುಹಾಕಲಾಗುವುದು ಎಂದು ಚಿನಾರ್ ಕಾರ್ಪ್ಸ್ನ ಕಮಾಂಡರ್ ಆಗಿರುವ ಧಿಲ್ಲೋನ್ ಅವರು ಖಡಕ್ ವಾರ್ನಿಂಗ್ ಕೊಟ್ಟರು.
ನಿನ್ನೆ ನಡೆದ 16 ಗಂಟೆಗಳ ಎನ್ಕೌಂಟರ್ನಲ್ಲಿ ಹತ್ಯೆಯಾದವರನ್ನು ಕಮ್ರಾನ್, ಅಬ್ದುಲ್ ರಷೀದ್ ಅಲಿಯಾಸ್ ಘಾಜಿ ಹಾಗೂ ಹಿಲಾಲ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಅಬ್ದುಲ್ ರಷೀದ್ ಎಂಬಾತ ಪುಲ್ವಾಮದ ಉಗ್ರ ದಾಳಿಯ ಸೂತ್ರಧಾರ ಎನ್ನಲಾಗಿದೆ. ಇನ್ನು, ಅಬ್ದುಲ್ ರಷೀದ್ ಮತ್ತು ಕಮ್ರಾನ್ ಇಬ್ಬರೂ ಕೂಡ ಜೈಷೆ ಮೊಹಮ್ಮದ್ ಸಂಘಟನೆಯ ಡಿವಿಷನಲ್ ಕಮಾಂಡರ್ ಆಗಿದ್ದರು.
ಫೆ. 14ರಂದು ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುತ್ತಿದ್ದ 2500 ಸಿಆರ್ಪಿಎಫ್ ಯೋಧರ ಮೇಲೆ ಪುಲ್ವಾಮ ಬಳಿ ಜೈಷೆ ಉಗ್ರನೊಬ್ಬ ಟ್ರಕ್ನಲ್ಲಿ ಸ್ಫೋಟಕ ತುಂಬಿಕೊಂಡು ಆತ್ಮಾಹುತಿ ದಾಳಿಎಸಗಿದ್ದ. ಈ ವೇಳೆ 42 ಯೋಧರು ಬಲಿಯಾಗಿ ಅನೇಕರು ಗಾಯಗೊಂಡರು. ಜಮ್ಮು-ಕಾಶ್ಮೀರದ ರಕ್ತ ಚರಿತ್ರೆಯಲ್ಲೇ ಅತ್ಯಂತ ಭಯಾನಕ ದಾಳಿಗಳಲ್ಲಿ ಇದೂ ಒಂದಾಗಿದೆ. ಜೈಷ್-ಎ-ಮೊಹಮ್ಮದ್ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿತ್ತು.
ಈ ಘಟನೆಯ ನಂತರ ಕೇಂದ್ರ ಸರಕಾರವು ಭಾರತೀಯ ಸೇನೆಗೆ ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಲು ಮುಕ್ತ ಸ್ವಾತಂತ್ರ್ಯ ನೀಡಿದೆ.