Kshetra Samachara
ಪಬ್ಲಿಕ್ ನೆಕ್ಸ್ಟ್ ವಿಶೇಷ
ಹುಬ್ಬಳ್ಳಿ/ ಕಲಘಟಗಿ: ಇತ್ತೀಚೆಗೆ ಅದೇಕೊ ಬಿಜೆಪಿ ಶಾಸಕರ ಹಣೆಬರಹವೇ ನೆಟ್ಟಗಿದ್ದಂತಿಲ್ಲ. ಅವರು ಅಧಿಕಾರಿಗಳೊಂದಿಗೆ ಏನೇ ಮಾತನಾಡಿದರೂ ವಿವಾದವುಂಟಾಗುತ್ತಿದೆ. ಅದರಲ್ಲೂ ಸ್ವಪಕ್ಷೀಯರ ಪರವಾಗಿ ಶಿಫಾರಸು ಮಾಡಿದರಂತೂ ಕತೆ ಮುಗಿದೇ ಹೋಯಿತು ಎಂದು ಹೇಳಬಹುದು. ಈಗ ಕಲಘಟಗಿ ಶಾಸಕ ಸಿ.ಎಂ ನಿಂಬಣ್ಣವರ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿ ಪೂರೈಕೆ ಬಗ್ಗೆ ಸಂಬಂಧಿಸಿದ ಮಹಿಳಾ ಅಧಿಕಾರಿಯೊಬ್ಬರಿಗೆ ಸೂಕ್ಷ್ಮವಾಗಿ ಶಿಫಾರಸು ಮಾಡಿದ ಆಡಿಯೋ ವೈರಲ್ ಆಗಿ ಭಾರಿ ಸುದ್ದಿ ಮಾಡತೊಡಗಿದೆ.
ಇದರಲ್ಲಿ ಇನ್ನೊಂದು ಸೂಕ್ಷ್ಮತೆಯೂ ಅಡಗಿದೆ. ಓರ್ವ ಜನಪ್ರತಿನಿಧಿ ತಮ್ಮ ಬೆಂಬಲಿಗರು ಹಾಗೂ ಮತದಾರರನ್ನು ಓಲೈಸುವುದರೊಂದಿಗೆ ಅಧಿಕಾರಿಗಳನ್ನೂ ಯಾವುದೇ ಇಕ್ಕಟ್ಟಿಗೆ ಸಿಲುಕಿಸದಂತೆ ಹೇಗೆ ವರ್ತಿಸಬೇಕೋ ಹಾಗೆ ನಿಂಬಣ್ಣವರ ವರ್ತಿಸಿದ್ದಾರೆ. ಆದರೆ ಶಾಸಕರೊಬ್ಬರ ದೂರವಾಣಿ ಅಥವಾ ಮೊಬೈಲ್ ಸಂಭಾಷಣೆಯನ್ನು ರಿಕಾರ್ಡ್ ಮಾಡಿ ವೈರಲ್ ಮಾಡಿದ್ದು ಯಾರು ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಇದರಲ್ಲಿ ಅಧಿಕಾರಿ ಶಾಮಿಲಾಗಿದ್ದಾರೆಯೋ ಅಥವಾ ಕಾಂಗ್ರೆಸ್ ಪಕ್ಷ ಎಲ್ಲ ಶಾಸಕರ ಫೋನ್ಗಳನ್ನು ಟ್ಯಾಪ್ ಮಾಡಿಸುತ್ತಿದೆಯೋ ಎಂಬ ಸಂಶಯ ಬಾರದಿರದು. ಏನೇ ಆಗಲಿ ಶಾಸಕ ನಿಂಬಣ್ಣವರ ಆಡಿಯೋ ಮೂಲಕ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಎಂಎಸ್ಪಿಟಿಸಿಗೆ ಕಚ್ಚಾ ಆಹಾರ ಸಾಮಗ್ರ ಸರಬರಾಜು ಮಾಡಲು ಭಾರಿ ಪೈಪೋಟಿ ಏರ್ಪಟ್ಟಿದೆ. ಈ ಮಧ್ಯೆ, ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ, ಸಿಡಿಪಿಓ ಪದ್ಮಾವತಿ ಸೌದರಿ ಅವರಿಗೆ ದೂರವಾಣಿ
ಮೂಲಕ ಸಾಧ್ಯವಾದರೆ ತಮ್ಮ ನಿಷ್ಠರಿಗೆ ಅನುಮತಿ ನೀಡುವಂತೆ ಸೂಚಿಸಿದ್ದಾರೆ. ಆದರೂ ನಿರ್ಧಾರ ನಿಮ್ಮ ವಿವೇಚನೆಗೆ ಬಿಟ್ಟಿದ್ದು ಎಂದು ಅಧಿಕಾರಿಗೆ ಹೇಳಿದ್ದಾರೆ. ಶಾಸಕರಿಂದ ಕರೆ ಸ್ವೀಕರಿಸಿದ ಮಹಿಳಾ ಅಧಿಕಾರಿ ಪದ್ಮಾವತಿ ಅವರು ಮಾತ್ರ, ಆಯ್ತು ಸಾರ್ ನೀವು ಹೇಳಿದಂತೆ ಮಾಡ್ತಿನಿ ಎಂದು ಪದೆ ಪದೆ ಹೇಳಿದ್ದಾರೆ.
ಜಟಾಪಟಿ...
ಶಾಸಕರ ನಿಷ್ಠರಿಗೆ ಕಚ್ಚಾ ಆಹಾರ ಸರಬರಾಜು ಮಾಡಲು ಅನುಮತಿ ನೀಡಿದ್ದು ಎಂಎಸ್ಪಿಟಿಸಿ ಅಧ್ಯಕ್ಷೆ ಜಯಶ್ರೀ ಅವರಿಗೆ ಕೆರಳುವಂತೆ ಮಾಡಿದೆ. ಇದರಿಂದ ಕೋಪಗೊಂಡ ಜಯಶ್ರೀ, ಸಿಡಿಪಿಓ ಪದ್ಮಾವತಿ ಅವರನ್ನು ಭೇಟಿಯಾಯಾದಾಗ Éಏರು ಧ್ವನಿಯಲ್ಲಿ ಮಾತುಕತೆ ನಡೆದಿದೆ.
ಯಾರದು ಕಿರಣ..?
ಏತನ್ಮಧ್ಯೆ, ಎಂಎಸ್ಪಿಟಿಸಿ ಅಧ್ಯಕ್ಷೆ ಜಯಶ್ರೀ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮುಖ್ಯ ಗುತ್ತಿಗೆದಾರನೊಬ್ಬನ ಜತೆ ವಿಸ್ತೃತವಾಗಿ ಚರ್ಚಿಸಿದ್ದಾರಲ್ಲದೇ, ಕನಿಷ್ಠ ಪಕ್ಷ ಬೆಲ್ಲದ ಸಪ್ಲೈ ಮಾಡಲು ನಮಗೆ ಬಿಟ್ಟು ಕೊಡಲು ಕಿರಣ ಅವರಿಗೆ ಹೇಳಿ ಎಂದು ಗುತ್ತಿಗೆದಾರ
ಜಯಶ್ರೀ ಅವರ ಬಳಿ ಅಂಗಲಾಚಿಕೊಳ್ಳುತ್ತಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿ ಕೇಳಿ ಬರುತ್ತಿದೆ.