Public News
ಪುಲ್ವಾಮ: ಜಮ್ಮು-ಕಾಶ್ಮೀರದ ಪುಲ್ವಾಮಾದ ಅವಂತಿಪೋರದಲ್ಲಿ ಆತ್ಮಾಹುತಿ ದಾಳಿಗೆ 44 ಯೋಧರು ವೀರಮರಣವನ್ನಪ್ಪಿದ್ದಾರೆ. ಆದರೆ 44 ಯೋಧರನ್ನು ಬಲಿಪಡೆದ ರಕ್ತಪಿಪಾಸುಗಳ ದುಷ್ಕೃತ್ಯದ ಹಿಂದಿನ ಪ್ಲಾನ್ ಈಗ ಒಂದೊಂದಾಗಿ ಹೊರಬರ್ತಿದೆ. ಈ ಪಾಪ ಕೃತ್ಯದ ಮಾಸ್ಟರ್ ಮೈಂಡ್ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ರಶೀದ್ ಘಾಝಿ. ಈತನೇ ಈ ದಾಳಿಯನ್ನು ಕಾರ್ಯರೂಪಕ್ಕೆ ತಂದಿದ್ದು ಅಂತಾ ಗುಪ್ತಚರ ಇಲಾಖೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಅಫ್ಘಾನಿಸ್ತಾನದಲ್ಲಿ ತರಬೇತುಗೊಂಡಿದ್ದ ಈತ ಸುಧಾರಿತ ಸ್ಫೋಟಕ ತಯಾರಿಕೆಯಲ್ಲಿ ಹೆಚ್ಚು ಪರಿಣಿತನಾಗಿದ್ದರಿಂದ ಪುಲ್ವಾಮಾ ಸ್ಫೋಟದ ಜವಾಬ್ದಾರಿ ಈತನಿಗೆ ನೀಡಲಾಗಿತ್ತು. ಎನ್ಎಸ್ಜಿ ಮತ್ತು ಎನ್ಐಎ ಮಾಹಿತಿ ಪ್ರಕಾರ ಸ್ಫೋಟಕ್ಕೆ ಉಗ್ರರು ಬಳಸಿದ್ದು ಬರೋಬ್ಬರಿ 100 ರಿಂದ 150ಕೆಜಿ ಆರ್ ಡಿಎಕ್ಸ್. ಇದರಲ್ಲಿ ಹರಿತ ಕಬ್ಬಿಣದ ಚೂರುಗಳನ್ನು ಬಳಕೆ ಮಾಡಲಾಗಿತ್ತು. ಈ ಬಗ್ಗೆ ಎನ್ಎಸ್ಜಿ ಮತ್ತು ಎನ್ಐಎ ಸ್ಯಾಂಪಲ್ ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದೆ.
ಕಾಕಪೋರ ಸಂಪರ್ಕಿಸುವ ಕಚ್ಚಾ ರಸ್ತೆ ಮೂಲಕ ಆತ್ಮಾಹುತಿ ಬಾಂಬರ್ ಬರುತ್ತಿದ್ದ. ಈತ ಸೆಡಾನ್ ಕಾರ್ ನಲ್ಲಿ ಬಂದು ಸರತಿ ಸಾಲಿನಲ್ಲಿ ಬರುತ್ತಿದ್ದ ಯೋಧರ ಐದನೇ ವಾಹನದ ಎಡಭಾಗಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸೆಡಾನ್ ಕಾರ್ ಡಿಕ್ಕಿ ಹೊಡೆಯುತ್ತಲೇ 150 ಮೀಟರ್ ವ್ಯಾಪ್ತಿಯಲ್ಲಿ ಆರ್ ಡಿಎಕ್ಸ್ ಸ್ಫೋಟಗೊಂಡಿದೆ. ಪರಿಣಾಮ 80 ಮೀಟರ್ ದೂರದವರೆಗೂ ಯೋಧರ ದೇಹಗಳು ಚೂರು ಚೂರಾಗಿ ಹಾರಿ ಬಿದ್ದಿದೆ. ಸ್ಫೋಟದ ತೀವ್ರತೆಗೆ ಸುಮಾರು 10 ಕಿ.ಮೀ. ಶಬ್ದ ಕೇಳಿತ್ತು. ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು ಅಂತ ಸ್ಥಳೀಯರು ಹೇಳಿದ್ದಾರೆ.
ದಾಳಿಗೆ ಸಹಕರಿಸಿದ ಆರೋಪದ ಮೇಲೆ ಪುಲ್ವಾಮಾ ಮತ್ತು ಆವಂತಿಪೋರಾದಲ್ಲಿ 7 ಮಂದಿ ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ. ಮೊದಲು ದಕ್ಷಿಣದ ಕಾಶ್ಮೀರದ ಮಿಡೂರದಲ್ಲಿ ಜೈಷ್ ಉಗ್ರ ಕಮ್ರಾನ್ ನೇತೃತ್ವದಲ್ಲಿ ಭಯಾನಕ ಕೃತ್ಯದ ಸಂಚು ರೂಪಿಸಲಾಗಿತ್ತು. ಆದ್ರೆ ಅದು ವಿಫಲಗೊಂಡಿತ್ತು. ಒಟ್ಟಿನಲ್ಲಿ ಸ್ಫೋಟದ ಹಿಂದಿರುವ ಪಾಕ್ ಸಂಚಿಗೆ ವಿಶ್ವದಾದ್ಯಂತ ಆಕ್ರೋಶ ವ್ಯಕ್ತವಾಗ್ತಿದೆ. ಭಾರತದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ.