Public News
ನಗರದಲ್ಲಿರುವ ಎಲ್ಲ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ಗಳನ್ನು ಬುಧವಾರ ಮಧ್ಯಾಹ್ನದೊಳಗೆ ತೆರವುಗೊಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅವರು ಎಲ್ಲ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜನೆ ಮಾಡಿದ್ದಾರೆ.
‘ಎಲ್ಲ ವಿಭಾಗಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ಗಳು, ಸೂಪರಿಂಟೆಂಡಿಂಗ್ ಎಂಜಿನಿಯರ್ಗಳು, ಕಾರ್ಯಪಾಲಕ ಎಂಜಿನಿಯರ್ಗಳು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳು ಬೇರೆ ಕೆಲಸಗಳನ್ನು ಬಿಟ್ಟು ತಮ್ಮ ವ್ಯಾಪ್ತಿಯಲ್ಲಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ಗಳ ತೆರವು ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪಾಲಿಕೆಯ ಇಡೀ ಆಡಳಿತ ಯಂತ್ರವನ್ನೂ ಈ ಕಾರ್ಯಾಚರಣೆಗೆ ಬಳಸಿಕೊಳ್ಳಬೇಕು’ ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತೆರವು ಕಾರ್ಯಕ್ಕೆ ಯಾರಾದರೂ ಅಡ್ಡಿ ಪಡಿಸಿದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆಯೂ ಅವರು ಸೂಚಿಸಿದ್ದಾರೆ.
‘ತೆರವು ಕಾರ್ಯಾಚರಣೆ ಸಂಬಂಧ ನಾನು ಮಧ್ಯಾಹ್ನ 2.30ಕ್ಕೆ ಹೈಕೋರ್ಟ್ಗೆ ಹಾಜರಾಗಿ ಹೇಳಿಕೆ ನೀಡಬೇಕಿದೆ. ಅಷ್ಟರೊಳಗೆ ಕಾರ್ಯಾಚರಣೆಯ ಸಮಗ್ರ ಮಾಹಿತಿ ನನಗೆ ತಲುಪಿರಬೇಕು’ ಎಂದು ತಿಳಿಸಿದ್ದಾರೆ.