Public News
ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಇದೂವರೆಗೂ ಜಲಾಶಯದಿಂದ ಖ್ಯಾತಿಗಳಿಸಿತ್ತು. ಈಗ ಇಲ್ಲಿ ನಿರ್ಮಾಣವಾಗಿರುವ ವಿಶಿಷ್ಟ ಉದ್ಯಾನವನದಿಂದಾಗಿ ಖ್ಯಾತಿಗಳಿಸುತ್ತಿದೆ.
ಅಂಜನಾಪುರ ಡ್ಯಾಂ ಆವರಣದಲ್ಲಿ ನಾಲ್ಕು ವರ್ಷದ ಹಿಂದೆ ಆರಂಭಗೊಂಡ ಉದ್ಯಾನವನ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಈ ವರ್ಷದಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆದಿದೆ. ಗ್ರಾಮೀಣ ಬದುಕನ್ನು ಪ್ರತಿಬಿಂಬಿಸುವ ಕಲಾಕೃತಿಗಳಿಂದ ಈ ಉದ್ಯಾನವನ ಎಲ್ಲರನ್ನೂ ಆಕರ್ಷಿಸುತ್ತಿದೆ.
ಉದ್ಯಾನವನ ಪ್ರವೇಶದಲ್ಲೇ ಈಸೂರು ಹೋರಾಟದ ಕಲಾಕೃತಿಗಳಿವೆ. ಗ್ರಾಮೀಣ ಕುಟುಂಬ, ಬೇಸಾಯ, ಭತ್ತದ ನಾಟಿ ಡೊಳ್ಳುಕುಣಿತ, ಜಗ್ಗಲಿಗೆ ಕುಣಿತ, ಕೋಲು ಕುಣಿತ, ಮಂಗಳವಾದ್ಯ, ಭಜನೆ, ಕುರಿ ಕಾಯುವ ದೃಶ್ಯ, ವಯೋವೃದ್ಧ ದನ ಕಾಯುವ ಹಾಗೂ ಎಮ್ಮೆ ಮೇಲೆ ಬಾಲಕ ಕುಳಿತ ಕಲಾಕೃತಿಗಳು ಉದ್ಯಾನದಲ್ಲಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಶಿಕಾರಿಪುರ ತಾಲೂಕಿನಲ್ಲಿ ಹರಿಯುವ ಕುಮದ್ವತಿ ನದಿಗೆ ಡ್ಯಾಂ ನಿರ್ಮಿಸಲು 1927ರಲ್ಲಿ ಮೈಸೂರು ಮಹಾರಾಜರು ಶಂಕುಸ್ಥಾಪನೆ ಮಾಡಿದ್ದರು. ಸುಮಾರು 10 ಸಾವಿರ ಎಕರೆ ಭೂಮಿಗೆ ನೀರುಣಿಸುತ್ತಿರುವ ಈ ಡ್ಯಾಂ ತುಂಬಿದಾಗ ಮಾತ್ರ ಜನ ಬಂದು ನಯನ ಮನೋಹರ ದೃಶ್ಯ ಕಣ್ತುಂಬಿಕೊಳ್ಳುತ್ತಿದ್ದರು. ಈಗ ವರ್ಷವಿಡೀ ಇಲ್ಲಿರುವ ಕಲಾಕೃತಿಗಳು ಜನರನ್ನು ಸೆಳೆಯಲಿವೆ. ಶಿಕಾರಿಪುರ ತಾಲೂಕಿನ ಪ್ರವಾಸಿ ತಾಣಗಳ ಸಾಲಿಗೆ ಹೊಸ ಸೇರ್ಪಡೆಯಾಗಿ ಈ ಅಂಜನಾಪುರ ಡ್ಯಾಂ ಉದ್ಯಾನವನ ಖ್ಯಾತಿ ಗಳಿಸುತ್ತಿದೆ.