Public News

News Subject: 
ಅಸ್ಸಾಂ ಜನಸಂಖ್ಯಾ ವರದಿ: 40 ಲಕ್ಷ ಮಂದಿಗೆ ಪೌರತ್ವವೇ ಇಲ್ಲ - ಅಸ್ಸಾಂ ಉದ್ವಿಗ್ನ
Upload Image: 
Body: 

ಬಹು ನಿರೀಕ್ಷಿತ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ನ (ಎನ್‌ಆರ್‌ಸಿ) ಅಂತಿಮ ಕರಡು ಸೋಮವಾರ ಪ್ರಕಟವಾಗಿದ್ದು, ಅಸ್ಸಾಂನ 40 ಲಕ್ಷ ಮಂದಿ ಭಾರತೀಯ ಪ್ರಜೆಗಳೆಂದು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ.

ರಾಜ್ಯದ ಒಟ್ಟು 3.29 ಕೋಟಿ ಜನಸಂಖ್ಯೆಯ ಪೈಕಿ 2.9 ಕೋಟಿ ಜನರ ಹೆಸರುಗಳು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಭಾರತದ ಪ್ರಜೆಗಳೆಂಬ ದೃಢೀಕರಣ ಪಡೆದಿದ್ದಾರೆ.

ದೇಶದಲ್ಲಿ ತನ್ನ ನಾಗರಿಕರ ದಾಖಲೆ ಹೊಂದಿರುವ ಏಕೈಕ ರಾಜ್ಯ ಅಸ್ಸಾಂ ಆಗಿದೆ. ಮುಸ್ಲಿಂ ದೇಶವಾದ ಬಾಂಗ್ಲಾದೇಶದಿಂದ ಅಕ್ರಮ ವಲಸಿಗರ ತೀವ್ರ ಸಮಸ್ಯೆ ಎದುರಿಸುತ್ತಿರುವ ಅಸ್ಸಾಂ, ಅವರು ಅಕ್ರಮವಾಗಿ ಮತ ಚಲಾಯಿಸುವ ಮೂಲಕ ರಾಜ್ಯದ ಜನಸಂಖ್ಯಾ ನಕ್ಷೆಯನ್ನೇ ಬದಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು.

ತಮ್ಮ ಪೌರತ್ವ ಸಾಬೀತುಪಡಿಸಲು ಒಟ್ಟು 3.29 ಕೋಟಿ ಮಂದಿ ದಾಖಲೆಗಳನ್ನು ಸಲ್ಲಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ಎನ್‌ಆರ್‌ಸಿ ಮೊದಲ ಕರಡನ್ನು ಪ್ರಕಟಿಸಿತ್ತು. ಅದರಲ್ಲಿ 1.9 ಕೋಟಿ ಜನರ ಸೇರ್ಪಡೆ ಮಾಡಲಾಗಿತ್ತು. ಇಂದು ಪ್ರಕಟವಾದ ಅಂತಿಮ ಕರಡಿನಲ್ಲಿ 2.9 ಕೋಟಿ ಜನರ ಹೆಸರು ಸೇರ್ಪಡೆ ಮಾಡಲಾಗಿದೆ.

ಅಸ್ಸಾಂನ ನಾಗರಿಕರೆಂದು ಸಾಬೀತುಪಡಿಸುವ ಈ ಐತಿಹಾಸಿಕ ದಾಖಲೆಯಲ್ಲಿ 40.07 ಲಕ್ಷ ಮಂದಿ ಸ್ಥಾನ ಪಡೆದಿಲ್ಲ.

ಹೀಗಾಗಿಯೇ ಇದನ್ನು ಅಂತಿಮ ಕರಡು ಎಂದು ಕರೆಯಲಾಗಿದ್ದು, ಅಂತಿಮ ದಾಖಲೆ ಎಂದು ಹೆಸರಿಸಿಲ್ಲ. ತಮ್ಮ ಹೆಸರು ಸೇರ್ಪಡೆಯಾಗದ ನಾಗರಿಕರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. 'ಇದು ಅಂತಿಮ ಕರಡು ಅಷ್ಟೆ, ಅಂತಿಮ ಪಟ್ಟಿಯಲ್ಲ; ಇದರಲ್ಲಿ ಸೇರ್ಪಡೆಯಾಗದ ಜನರು ತಮ್ಮ ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಬಹುದು' ಎಂದು ಎನ್‌ಆರ್‌ಸಿ ಸಂಚಾಲಕ ಶೈಲೇಶ್‌ ತಿಳಿಸಿದರು.

ಮೊದಲ ಪಟ್ಟಿಯಲ್ಲಿ ಹೆಸರಿದ್ದು, ಅಂತಿಮ ಕರಡಿನಲ್ಲಿ ಹೆಸರು ಇಲ್ಲದವರೂ ಮೇಲ್ಮನವಿ ಸಲ್ಲಿಸಬಹುದು. ಮೊದಲ ಪಟ್ಟಿಯಲ್ಲಿ ಹೆಸರಿದ್ದು, ಅಂತಿಮ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಪತ್ರಗಳನ್ನು ಕಳುಹಿಸಲಾಗುತ್ತದೆ. ಅದನ್ನು ಆಧರಿಸಿ ಅವರು ಹಕ್ಕು ಮತ್ತು ಆಕ್ಷೇಪಗಳನ್ನು ಸಲ್ಲಿಸಬಹುದು ಎಂದು ಅವರು ವಿವರಿಸಿದರು.

'ಆಗಸ್ಟ್‌ 30ರಂದು ಹಕ್ಕು ಮತ್ತು ಆಕ್ಷೇಪಗಳ ಸಲ್ಲಿಕೆ ಆರಂಭವಾಗುತ್ತದೆ. ಸೆಪ್ಟೆಂಬರ್‌ 28ರ ವರೆಗೂ ಸಲ್ಲಿಸಬಹುದು. ಜನರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತದೆ. ನಿಜವಾದ ಭಾರತೀಯ ಪ್ರಜೆಗಳು ಪಟ್ಟಿಯಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗುವುದು' ಎಂದು ಶೈಲೇಶ್‌ ತಿಳಿಸಿದರು.

ಕಾಂಗ್ರೆಸ್‌, ತೃಣಮೂಲ ಅತೃಪ್ತಿ:
ಕರಡು ಪಟ್ಟಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್‌ ಅಧ್ಯಕ್ಷ ರಿಪುನ್ ಬೋರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. '40 ಲಕ್ಷ ಹೆಸರುಗಳನ್ನು ಅನರ್ಹಗೊಳಿಸಿರುವುದು ಆಶ್ಚರ್ಯಕರ. ವರದಿಯಲ್ಲಿ ಸಾಕಷ್ಟು ದೋಷಗಳಿವೆ. ರಾಜ್ಯ ಸರಕಾರ ಮತ್ತು ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸುತ್ತೇವೆ. ಇದರ ಹಿಂದೆ ಬಿಜೆಪಿಯ ರಾಜಕೀಯ ದುರುದ್ದೇಶವಿದೆ' ಎಂದು ಅವರು ಟೀಕಿಸಿದರು.

ತೃಣಮೂಲ ಕಾಂಗ್ರೆಸ್‌ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 'ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿಯೇ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಾದ 40 ಲಕ್ಷ ಮಂದಿಯನ್ನು ಪಟ್ಟಿಯಿಂದ ಹೊರಗಿಟ್ಟಿದೆ. ಇದರಿಂದಾಗಿ ಅಸ್ಸಾಂ ಅಷ್ಟೇ ಅಲ್ಲ, ನೆರೆಯ ರಾಜ್ಯಗಳಲ್ಲೂ ಜನಸಂಖ್ಯಾ ಅನುಪಾತದಲ್ಲಿ ಭಾರೀ ಪರಿಣಾಮಗಳಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಬಂದು ವಿವರಣೆ ನೀಡಬೇಕು' ಎಂದು ಟಿಎಂಸಿಯ ಎಸ್‌.ಎಸ್‌ ರಾಯ್‌ ಆಗ್ರಹಿಸಿದರು.

ಗೃಹಸಚಿವರ ಭರವಸೆ:
ಪಟ್ಟಿಯಲ್ಲಿ ಹೆಸರು ಇಲ್ಲದವರ ವಿರುದ್ಧ ತರಾತುರಿಯ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. 'ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಕೆಲವರು ತಪ್ಪು ಮಾಹಿತಿ ಹರಡುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಸಲು ಹವಣಿಸುತ್ತಿದ್ದಾರೆ. ಇದು ಕರಡು ಪಟ್ಟಿಯೇ ಹೊರತು ಅಂತಿಮ ದಾಖಲೆಯಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

ಅಸ್ಸಾಂ ಜನತೆಗೆ ಸಿಎಂ ಅಭಿನಂದನೆ:
ಎನ್‌ಆರ್‌ಸಿಯಲ್ಲಿ ಯಶಸ್ವಿಯಾಗಿ ಹೆಸರು ನೋಂದಾಯಿಸಿಕೊಂಡ ಜನತೆಗೆ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌ ಅಭಿನಂದನೆ ಸಲ್ಲಿಸಿದ್ದಾರೆ.

ಅಸ್ಸಾಂ ಉದ್ವಿಗ್ನ: ಎನ್‌ಆರ್‌ಸಿ ಅಂತಿಮ ಕರಡು ಹೊರಬಿದ್ದ ಹಿನ್ನೆಲೆಯಲ್ಲಿ ಸೋಮವಾರ ಅಸ್ಸಾಂನಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಪರಿಸ್ಥಿತಿ ನಿಭಾಯಿಸಲು 22,000 ಅರೆ ಮಿಲಿಟರಿ ಪಡೆಗಳನ್ನು ರಾಜ್ಯಕ್ಕೆ ರವಾನಿಸಲಾಗಿದೆ.

ಎನ್‌ಆರ್‌ಸಿ ಎಂಬುದು ರಾಷ್ಟ್ರೀಯ ಯೋಜನೆ. ಪ್ರತಿಯೊಬ್ಬ ಭಾರತೀಯ ನಾಗರಿಕನೂ ಶಾಂತಿ ಕಾಪಾಡುವ ಬದ್ಧತೆ ಹೊಂದಿರುತ್ತಾನೆ. ಸಮಾಜದ್ರೋಹಿ ಶಕ್ತಿಗಳು ನಡೆಸುವ ಯಾವುದೇ ಪ್ರಚೋದನಕಾರಿ ಕೃತ್ಯಗಳನ್ನು ತಡೆಯಲು ಜನತೆ ಮುಂದಾಗಬೇಕು' ಎಂದು ಸೊನೊವಾಲ್‌ ಮನವಿ ಮಾಡಿದರು.

Reach Count: 
1