Public News
ಚಂದ್ರನಲ್ಲಿ ಶಿರಡಿ ಬಾಬಾ ಕಾಣಿಸುತ್ತಿದ್ದಾರೆ ಎಂಬ ಚಿತ್ರ ಸಮೇತದ ಸಂದೇಶವೊಂದು ಶನಿವಾರ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿತ್ತು. ಇದನ್ನು ನಂಬಿದ ಅಮಾಯಕ ಜನ ನಿದ್ದೆಗೆಟ್ಟು ಆಕಾಶದ ಕಡೆ ಮುಖಮಾಡಿ ನಿಂತಿದ್ದಾರೆ.
ರಾತ್ರಿಗತ್ತಲಿನಲ್ಲಿ ಮನೆಯಿಂದ ಆಚೆ ಬಂದ ಜನರು ಸಾಯಿಬಾಬಾನಿಗಾಗಿ ಚಂದ್ರನತ್ತ ದೃಷ್ಟಿ ನೆಟ್ಟಿದ್ದಾರೆ. ಕೆಲವೆಡೆಯಂತೂ ದೂರದರ್ಶಕವನ್ನಿಟ್ಟುಕೊಂಡು ಚಂದ್ರನನ್ನು ನೋಡಿದ್ದಾರೆ. ಮೋಡ ಮುಸುಕಿದಾಗ ಮಿಸುಕಾಡಿದ್ದಾರೆ. ಚಂದ್ರ ಮತ್ತೆ ಕಾಣುತ್ತಿದ್ದಂತೆ ಬಾಬಾ ಆರಾಧನೆಯಲ್ಲಿ ಮೈಮರೆತಿದ್ದಾರೆ. ಸಾಯಿ ಬಾಬಾ ಕಂಡರೆನ್ನುತ್ತ ಭಕ್ತಿಪರವಶರಾಗಿ ಪೂಜೆ ಪುನಸ್ಕಾರ ಮಾಡಿ ಪ್ರಸಾದ (ಚರ್ಪು) ಹಂಚಿದ್ದಾರೆ.
ಚಂದಿರನಲ್ಲಿ ಬಾಬಾನನ್ನು ಹುಡುಕಾಡುತ್ತಿರುವ ಜನ
ಮಧ್ಯರಾತ್ರಿಯಿಂದ ಅಂಬರದತ್ತ ಮುಖ ಮಾಡಿದ್ದ ಜನ ತಮ್ಮ ಮನಸ್ಸಿಗೆ ನೆಮ್ಮದಿಯಾಗುವವರೆಗೂ ಚಂದ್ರನನ್ನು ನೋಡಿ, ಸಾಯಿಬಾಬಾ ನನಗೆ ಕಂಡರು, ನಿನಗೆ ಕಾಣಿಸಿದರಾ, ಪುಣ್ಯ ಮಾಡಿವರಿಗೆ ಮಾತ್ರ ಕಾಣುತ್ತಾರೆ. ಬಾಬಾ ಕೃಪೆ ಇದ್ದವರಿಗೆ ಮಾತ್ರ ದರುಶನ ಸಿಗುವುದು ಎನ್ನುತ್ತ ನಸುಕಿನ ಹೊತ್ತಿಗೆ ಸುಖ ನಿದ್ದೆಗೆ ಜಾರಿದ್ದಾರೆ.
ಅವರವರ ಭಾವಕ್ಕೆ, ಭಕುತಿಗೆ ಎನ್ನುವಂತೆ ಎಷ್ಟು ಜನರಿಗೆ ಚಂದ್ರನಲ್ಲಿ ಸಾಯಿಬಾಬಾ ದರ್ಶನವಿತ್ತನೋ ಗೊತ್ತಿಲ್ಲ, ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಫೋಟೊ ಮಾತ್ರ ಎಡಿಟೆಡ್ ಎನ್ನುವುದು ನೋಡಿದ ಕೂಡಲೇ ಸ್ಪಷ್ಟವಾಗುವಂತಿದೆ.