Public News
ಬೆಂಗಳೂರು- ಮುಂಬಯಿ ಸೇರಿದಂತೆ ಮಹಾನಗರಗಳ ರಸ್ತೆಗಳು ಗುಂಡಿಮಯವಾಗಿದ್ದು ಅಪಘಾತಗಳಿಗೆ ಕಾರಣವಾಗುತ್ತಲೇ ಇರುತ್ತವೆ. ಇಂತಹದ್ದೇ ರಸ್ತೆಗುಂಡಿಯಿಂದಾಗಿ ಅಪಘಾತಕ್ಕೊಳಗಾಗಿ ಮಗನನ್ನು ಕಳೆದುಕೊಂಡಿದ್ದ ತಂದೆಯೊಬ್ಬರು ರಸ್ತೆ ಗುಂಡಿಗಳನ್ನು ಮುಚ್ಚುವ ಕಾಯಕದಲ್ಲಿ ತೊಡಗಿದ್ದಾರೆ. ತನ್ನ ಮಗನಂತೆ ಮತ್ಯಾರದೋ ಮಗ/ಳು ಗುಂಡಿಯಲ್ಲಿ ಸಮಾಧಿಯಾಗದಿರಲೆಂಬ ಕಳಕಳಿಯೇ ಅವರ ಈ ನಿಸ್ವಾರ್ಥ ಕೆಲಸಕ್ಕೆ ಮೂಲ ಕಾರಣ.
ಕಳೆದ 3 ವರ್ಷದ ಹಿಂದೆ ( ಜುಲೈ 28, 2015) ಜೋಗೇಶ್ವರಿ ವಿಖ್ರೋಲಿ ಲಿಂಕ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದಾದಾರಾವ್ ಬಿಲ್ಹೋರೆ ತಮ್ಮ 16 ವರ್ಷದ ಮಗ ಪ್ರಕಾಶನನ್ನು ಕಳೆದುಕೊಂಡಿದ್ದರು. ಶನಿವಾರ ಆತ (ಜುಲೈ 28) ಸತ್ತು ಮೂರು ವರ್ಷವಾಗಿದ್ದು, ಅಪಘಾತ ನಡೆದ ಸ್ಥಳದಲ್ಲಿ ಇಂದು ರಸ್ತೆ ಗುಂಡಿ ಮುಚ್ಚುವ ಮೂಲಕ ಅವರು ಮಗನಿಗೆ ಗೌರವ ಸಲ್ಲಿಸಿದರು.
ಮಗನನ್ನು ಕಳೆದುಕೊಂಡಾಗಿನಿಂದ ಈ ಕೆಲಸ ಆರಂಭಿಸಿದ್ದ ಅವರು ಇಲ್ಲಿಯವರೆಗೆ ಬರೋಬ್ಬರಿ 556 ರಸ್ತೆ ಗುಂಡಿ ಮುಚ್ಚಿದ್ದಾರೆ. ''ನನ್ನ ಸ್ಥಿತಿ ಮತ್ಯಾರಿಗೂ ಬರಬಾರದು, ಹೀಗಾಗಿ ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಅಫಘಾತಗಳಾದ ಮಾತ್ರ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚುವ ಕೆಲಸಕ್ಕೆ ಕೈ ಹಾಕುತ್ತಾರೆ. ಏನಾದರೂ ದೊಡ್ಡ ಅವಘಡ ಆಗಬೇಕು ಎಂದು ಕಾಯುವುದಾದದರೂ ಯಾಕೆ ಎನ್ನುವುದೇ ನನ್ನ ಪ್ರಶ್ನೆ'', ಎಂದವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇತ್ತೀಚಿಗೆ ಅವರ ಸೊಸೆ ಕೂಡ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೊಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ.