Kshetra Samachara
ಧಾರವಾಡ: ಅಳ್ನಾವರ ತಾಲೂಕಿನ ಹುಲ್ಲಿಕೇರಿ ಇಂದಿರಮ್ಮನ ಕೆರೆ ಅತಿವೃಷ್ಟಿಯಿಂದಾಗಿ ಒಡೆದಿದ್ದು, ಅದರ ವೀಕ್ಷಣೆಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ದಂಡೇ ಅಲ್ಲಿಗೆ ಆಗಮಿಸಿತ್ತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಸೇರಿದಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದಂಡೇ ಅಲ್ಲಿಗೆ ತೆರಳಿ ಕೆರೆ ವೀಕ್ಷಣೆ ಮಾಡಿದೆ.
ಕೆರೆ ಒಡೆಯಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೇ ಕಾರಣ ಕೆರೆಯ ಗೇಟ್ ಓಪನ್ ಆಗದ ಹಿನ್ನೆಲೆಯಲ್ಲಿ ಅವಾಂತರ ಸೃಷ್ಟಿಯಾಗಿದೆ ಎಂದು ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ಅವರು ಸಚಿವರಿಗೆ ತಾಂತ್ರಿಕ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಶಾಸಕ ಸಿ.ಎಂ.ನಿಂಬಣ್ಣವರ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡು ಗೇಟ್ ಓಪನ್ ಮಾಡಿದ್ದರೆ ಬಗ್ಗೆ ಮಾಹಿತಿ ಕೊಡಿ ಎಂದಿದ್ದಾರೆ. ಬಳಿಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೂಡ ಗರಂ ಆಗಿ ಸಣ್ಣ ನೀರಾವರಿ ಇಲಾಖೆಯ ಎಇಇ ಮತ್ತು ಇಇ ಅವರನ್ನು ಅಮಾನತ್ತು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಮಸ್ಯೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ಇಂದಿರಮ್ಮನ ಕೆರೆ ಅಭಿವೃದ್ಧಿ ಸಂಬಂಧ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ಈ ಕೆರೆ ಕಲಘಟಗಿ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ. ಕೆರೆ ಸಂರಕ್ಷಣೆ ಹಾಗೂ ಕೆರೆ ದುರಸ್ಥಿಗೊಳಿಸಲು ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಿಕೊಂಡು ಬರುವ ಪ್ರಯತ್ನವನ್ನು ಸಚಿವರ ಸಹಕಾರದೊಂದಿಗೆ ಮಾಡುತ್ತೇನೆ ಎಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
ಸದ್ಯ ಇಂದಿರಮ್ಮನ ಕೆರೆ ಒಡೆದು ದೊಡ್ಡಮಟ್ಟದಲ್ಲಿ ನೀರು ಹರಿಯುತ್ತಿದ್ದು, ಆ ಭಾಗದ ಜನರಿಗೆ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ಕೆರೆ ವೀಕ್ಷಣೆ ಮಾಡಿರುವ ಜನಪ್ರತಿನಿಧಿಗಳು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.