Kshetra Samachara
ಬ್ರಹ್ಮಾವರ: ಲಾಕ್ ಡೌನ್ ಕಾರಣದಿಂದಾಗಿ ಕರಾವಳಿಯ ಯಕ್ಷಗಾನ ಮೇಳಗಳ ಪ್ರದರ್ಶನ ಎ.26 ರಿಂದ ಸ್ಥಗಿತಗೊಂಡಿದೆ ಹಾಗೂ ದೇಗುಲಗಳಲ್ಲಿ ಪೂಜೆ, ಪುನಸ್ಕಾರ ಭಕ್ತರ ಆಗಮಿಸುವಿಕೆಗೆ ನಿಷೇಧವಿರುವುದರಿಂದ ಸಂಪ್ರದಾಯದಂತೆ ಯಕ್ಷಗಾನ ಮೇಳಗಳ ಕೊನೆಯ ದೇವರ ಸೇವೆಗೂ ಹಿನ್ನಡೆಯಾಗಿತ್ತು. ಪ್ರತಿಯೊಂದು ಯಕ್ಷಗಾನ ಮೇಳಗಳು ಪ್ರದರ್ಶನ ಆರಂಭವಾಗುವ ಪ್ರಥಮ ದಿನ ಹಾಗೂ ಪ್ರದರ್ಶನದ ಕೊನೆಯ ದಿನ ದೇಗುಲದಲ್ಲೇ ಸೇವಾ ಪ್ರದರ್ಶನವನ್ನು ನೀಡಿ ದೇವರಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ ಮತ್ತು ಇದಕ್ಕೆ ಚ್ಯುತಿಯಾಗಬಾರದು ಎನ್ನುವ ನಂಬಿಕೆ ಇದೆ. ಆದರೆ ಈ ಬಾರಿ ಲಾಕ್ ಡೌನ್ ಕಾರಣದಿಂದ ತೆಂಕು- ಬಡಗಿನ ಬಹುತೇಕ ಯಕ್ಷಗಾನ ಮೇಳಗಳ ಕೊನೆಯ ದೇವರ ಸೇವೆ ಆಟ ಆಡಿಸಲಾಗಿಲ್ಲ.
ಈ ನಡುವೆ ಮಂದಾರ್ತಿ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಅತ್ಯಂತ ಸರಳವಾಗಿ ಸಂಪ್ರದಾಯಕ್ಕೆ ಚ್ಯುತಿಬಾರದಂತೆ ಮತ್ತು ಕೋವಿಡ್ ನಿಯಮಗಳನ್ನು ಪಾಲಿಸಿ ಜೂ. 13ರಂದು ರಾತ್ರಿ ಮೇಳದ ಕೊನೆಯ ದೇವರ ಸೇವೆ ನೆರವೇರಿಸಲಾಯಿತು. ಈ ಹಿಂದೆ ಮಂದಾರ್ತಿ ಐದು ಮೇಳಗಳ ಕೊನೆಯ ದೇವರ ಸೇವೆಗೆ ಸುಮಾರು 200ಕ್ಕೂ ಹೆಚ್ಚು ಕಲಾವಿದರು, ಸಾವಿರಾರು ಪ್ರೇಕ್ಷಕರ ಸೇರುತ್ತಿದ್ದರು. ಆದರೆ ಈ ಬಾರಿ ಐದು ಮೇಳದ ಹತ್ತು ಮಂದಿ ಕಲಾವಿದರು, ನಾಲ್ಕೈದು ಮಂದಿ ಹಿಮ್ಮೇಳದವರು, ಐದಾರು ಮಂದಿ ದೇಗುಲದ ಸಿಬಂದಿಗಳ ನಡುವಲ್ಲಿ ಸೇವೆ ಸಂಪನ್ನ ಗೊಂಡಿತು. ಸಂಪ್ರದಾಯತೆ ಐದು ಮೇಳಗಳ ಗಣಪತಿ ದೇವರಿಗೆ ಪೂಜೆ ನೆರವೇರಿಸಿ, ಸ್ತ್ರೀ ವೇಷ, ಪುರುಷ ವೇಷಧಾರಿಗಳಿಂದ ಸಾಂಕೇತಿಕ ನರ್ತನ ಸೇವೆ ನೆರವೇರಿಸಿ ಸೇವೆ ಸಂಪನ್ನಗೊಳಿಸಲಾಯಿತು. ಸುಮಾರು ಒಂದುವರೇ ತಿಂಗಳ ಯಕ್ಷಗಾನ ಪ್ರದರ್ಶನ ರದ್ದಾಗಿರುವುದರಿಂದ ಮತ್ತು ಮಳೆಗಾಲದ ಪ್ರದರ್ಶನಕ್ಕೆ ಅವಕಾಶ ಇಲ್ಲದಿರುವುದರಿಂದ ಕರಾವಳಿಯ ಸಾವಿರಾರು ಮಂದಿ ಯಕ್ಷ ಕಲಾವಿದರ ಬದುಕು ದುಸ್ತರವಾಗಿದೆ.