Kshetra Samachara
ಬೆಳಗಾವಿ: ತಲೆ ಬುರುಡೆ ಸಮೇತ ಜಿಂಕೆ ಕೊಂಬನ್ನು ಅಕ್ರಮವಾಗಿ ಸಾಗಿಸು ಯತ್ನಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪದ ಗ್ರಾಮದ ನಾಗೇಶ ಇಟಗಿ (47) ಹಾಗೂ ಅಭಿಷೇಕ್ ಕೊರವರ (18) ಬಂಧಿತರು. ಇದಲ್ಲದೇ ರಾಯಬಾಗ ತಾಲೂಕಿನ ಹಾರೋಗೇರೆ ಗ್ರಾಮದ ಬಾಬು ಜಮಾದಾರ (45) ಮತ್ತು ಬೆಳಗಾವಿ ತಾಲೂಕಿನ ಸಾಂಬ್ರಾ ನಿವಾಸಿ ಶಂಕರ ಲಕ್ಷ್ಮಣ ದೇಸಾಯಿ (32) ಆರೋಪಿಗಳು ತಪ್ಪಿಸಿಕೊಂಡು ತಲೆ ಮರಿಸಿಕೊಂಡಿದ್ದಾರೆ.
ನಾಲ್ವರು ಆರೋಪಿಗಳು ಹಣದಾಸೆಗೆ ಕಾಡಿನಲ್ಲಿರುವ ಜಿಂಕೆ ಕೊಂದು ಮಾರಾಟಕ್ಕೆ ತೆಗೆದುಕೊಂಡು ಹೋಗಲು, ಕಿತ್ತೂರ ತಾಲೂಕಿನ ದಾಸ್ತಿಕೊಪ್ಪ ಬಸ್ ನಿಲ್ದಾಣದಲ್ಲಿ ನಿಂತಿದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳಗಾವಿ ಅರಣ್ಯ ವಿಭಾಗದ ಹಾಗೂ ಬೆಳಗಾವಿ ವಲಯ ಮತ್ತು ಗೋಲಿಹಳ್ಳಿ ವಲಯದ ಸಿಬ್ಬಂದಿ ಜಂಟಿಯಾಗಿ ಕಾರ್ಯಚರಣೆ ಮಾಡುವ ಮೂಲಕ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಅಮರನಾಥ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ.ಕುಸನಾಳ, ಸಿ.ಜಿ.ಮಿರ್ಜಿರವರ ಮಾರ್ಗದರ್ಶನದಲ್ಲಿ ಬೆಳಗಾವಿ ವಲಯ ಅರಣ್ಯ ಅಧಿಕಾರಿ ಶಿವಾನಂದ ಮಗದುಮ, ಚಂದ್ರಶೇಖರ ಪಾಟೀಲ, ಗುಜನಾಳ ವಲಯ ಅರಣ್ಯ ಅಧಿಕಾರಿ ರತ್ನಾಕರ ಓಬಣ್ಣವರ ಹಾಗೂ ಗೋಲಿಹಳ್ಳಿ ವಲಯ ಅರಣ್ಯ ಅಧಿಕಾರಿ ಶ್ರೀನಾಥ ಎಂ.ಕಡೋಲ್ಕರ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.