Kshetra Samachara
ವರದಿ: ಶಫೀ ಉಚ್ಚಿಲ
ಕಟಪಾಡಿ: ಇಲ್ಲಿನ ಶಂಕರಪುರ ಶಿವಾನಂದ ನಗರದ ನಿವಾಸಿ ಪ್ರೇಮಾ ಎಂಬ ಅಸಹಾಯಕ ವೃದ್ಧ ಮಹಿಳೆಗೆ ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಟಪಾಡಿಯ" ಸತ್ಯದ ತುಳುವೆರ್" ಸಂಸ್ಥೆ, ನೂತನ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದೆ.
ತೀರಾ ಬಡತನದಲ್ಲಿದ್ದ ಪ್ರೇಮಾ ಅವರು, ಗಂಡ ತೀರಿ ಹೋದ ಬಳಿಕ ಮಗನೊಂದಿಗೆ ಶಂಕರಪುರದ ಶಿವಾನಂದ ನಗರದಲ್ಲಿರುವ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಹಳೆಯ ಚಿಕ್ಕ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದರು. ಇವರ ದುಸ್ಥಿತಿ ಅರಿತ 'ಸತ್ಯದ ತುಳುವೆರ್', ದಾನಿಗಳ ಸಹಕಾರದಿಂದ ಕಾಮಗಾರಿಗಿಳಿದು ಹೊಸ ಮನೆ ನಿರ್ಮಿಸಿ, ಹಸ್ತಾಂತರಿಸಿದೆ.
ಸತ್ಯದ ತುಳುವೆರ್ ಸಂಸ್ಥೆಯ 21ನೇ ಮನೆ ನೀಡುವ ಸೇವಾ ಕೈಂಕರ್ಯ ಇದಾಗಿದ್ದು, ಈ ಬಗ್ಗೆ ಸಂಸ್ಥೆ ಸಂಸ್ಥಾಪಕ ಪ್ರವೀಣ್ ಕುರ್ಕಾಲು ಮಾಹಿತಿ ನೀಡಿದರು. ಗೌರವಾಧ್ಯಕ್ಷೆ ಗೀತಾಂಜಲಿ ಸುವರ್ಣ ಮಾತನಾಡಿ, ಪಂಚಾಯಿತಿ ವತಿಯಿಂದ ಈ ಬಡ ಮಹಿಳೆಗೆ ಯಾವುದೇ ಅನುದಾನ ಬಂದಿಲ್ಲ. ಈ ನಿಟ್ಟಿನಲ್ಲಿ ಯುವಕರ ತಂಡ ಹೊಸ ಮನೆ ನಿರ್ಮಿಸಿ ಕೊಟ್ಟಿದೆ ಎಂದು ಗ್ರಾಪಂ ವಿರುದ್ಧ ಅಸಮಾಧಾನವನ್ನೂ ವ್ಯಕ್ತಪಡಿಸಿದರು.
ಪ್ರೇಮಾ ಅವರು ಮಾತನಾಡಿ, "ನನ್ನ ಮನೆ ಸಂಪೂರ್ಣ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ನನ್ನ ಕಷ್ಟ ಅರಿತ ಸಹೃದಯಿಗಳು ನನಗೆ ಹೊಸ ಮನೆ ನಿರ್ಮಿಸಿ ಕೊಟ್ಟಿದ್ದಾರೆ" ಎಂದು ಖುಷಿ ವ್ಯಕ್ತಪಡಿಸಿದರು. ಅಧ್ಯಕ್ಷ ಪ್ರವೀಣ್ ಬಂಗೇರ, ಕಾರ್ಯದರ್ಶಿ ಮನೀಶ್ ಕುಲಾಲ್ , ಕೋಶಾಧಿಕಾರಿ ಶಿವಪ್ರಸಾದ್ ಮತ್ತು ಸದಸ್ಯರು ಉಪಸ್ಥಿತರಿದ್ದರು.