Public News
ಬೆಂಗಳೂರು: ಬೈಕ್ ಅಪಘಾತದಲ್ಲಿ ಮೆದುಳಿಗೆ ತೀವ್ರ ಸ್ವರೂಪದ ಗಾಯಗಳಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ.ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಜೀವನದ ಸಂಚಾರ ಮುಗಿಸಿದ್ದಾರೆ. ಇನ್ನು ವೈದ್ಯರು ಇಂದು ಅವರ ದೇಹದ ಸ್ಥಿತಿ ಬಗ್ಗೆ ಅವರ ಕುಟುಂಬಸ್ಥರಿಗೆ ವಿವರಿಸಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ನಂತರ ಅವರ ಸೋದರ ಸಿದ್ದೇಶ್ ಕುಮಾರ್ ಭಾವಪೂರ್ಣಕವಾಗಿ ಮಾತನಾಡಿದ್ದಾರೆ.
ಇಂದು ಇಂತಹ ಸ್ಥಿತಿಗೆ ನಮ್ಮ ಸೋದರ, ನಾವು ತಲುಪುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಸಂಚಾರಿ ವಿಜಯ್ ಸಮಾಜದಲ್ಲಿರುವ ಜನರ ಕಷ್ಟಗಳಿಗೆ ತುಡಿಯುತ್ತಿದ್ದ ವ್ಯಕ್ತಿ, ಕಷ್ಟದಲ್ಲಿರುವವರಿಗೆ ಯಾವಾಗಲೂ ಸಹಾಯ ಮಾಡುತ್ತಿದ್ದ, ಉತ್ತಮ ನಟ, ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ, ಜೀವ ಇರುವಾಗ ನಾಲ್ಕು ಜನರಿಗೆ ಸಹಾಯ ಮಾಡುತ್ತಿದ್ದ ಅವನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಸಮಾಜಕ್ಕಾಗಿ ದುಡಿಯುತ್ತಿದ್ದ ಅವನ ದೇಹದ ಅಂಗಾಂಗಳನ್ನು ದಾನ ಮಾಡಿ ನಾಲ್ಕು ಜನಕ್ಕೆ ಉಪಯೋಗವಾಗಲಿ, ಅವರು ಇಲ್ಲದಿರುವ ದಿನಗಳಲ್ಲಿಯೂ ಅವರನ್ನು ನಾಲ್ಕು ಜನರಲ್ಲಿ ನಾವು ನೋಡುವಂತಾಗಬೇಕು ಎಂಬುದೇ ನಮ್ಮ ಬಯಕೆಯಾಗಿದೆ ಎಂದರು.