Public News
ಬೆಳಗಾವಿ: ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಲ್ಲಿ ರಾಜ್ಯದಲ್ಲಿರುವ ಜಿಲ್ಲಾಸ್ಪತ್ರೆ, ತಾಲೂಕಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಲೋಕಸಭೆ ಸಂಸದರು, ಶಾಸಕರು ನೀಡಿರುವ ಆಂಬ್ಯುಲೆನ್ಸ್ ವಾಹನಗಳ ಮೇಲೆ ಸಂಬಂಧಿಸಿದಂತೆ ಅವರ ಭಾವಚಿತ್ರಗಳನ್ನು ಅಳವಡಿಸಿರುವುದನ್ನು ತೆರವುಗೊಳಿಸಬೇಕೆಂದು ಸರಕಾರ ಯೋಜನೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿ ಆಂಬ್ಯುಲೆನ್ಸ್ ಅಭಾವದಿಂದ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ಹೆಚ್ಚಿನ ಚಿಕಿತ್ಸೆ ವೈದ್ಯಕೀಯ ಉಪಚಾರವನ್ನು ನೀಡಲು ಸಾಧ್ಯವಾಗದೆ ಇರುವುದನ್ನು ಮನಗಂಡ ಸಂಸದ, ಶಾಸಕರು ಆಂಬ್ಯುಲೆನ್ಸ್ ವಾಹನ ನೀಡಿರುವುದು ಸಂತಸದ ವಿಷಯ ಆದರೆ ಆಂಬ್ಯುಲೆನ್ಸ್ ಮೇಲೆ ಅವರ ಭಾವ ಚಿತ್ರ ಹಾಕಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಗಡಾದ ಪ್ರಶ್ನಿಸಿದ್ದಾರೆ.
ಸಾರ್ವಜನಿಕರ ತೆರಿಗೆ ರೂಪದಲ್ಲಿ ಸಂಗ್ರಹಿಸಲಾದ ಹಣದಲ್ಲಿ ಕೆಲ ಭಾಗವನ್ನು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ದಿ ನಿಧಿಗೆ ನೀಡಲಾಗುತ್ತಿದೆ. ಹೀಗಿರುವಾಗ ಜನಪ್ರತಿನಿಧಿಗಳು ತಮ್ಮ ಪ್ರಚಾರ ಮಾಡಿಕೊಳ್ಳಲು ತಮ್ಮ ತಮ್ಮ ಭಾವಚಿತ್ರಗಳನ್ನು ಅಳವಡಿಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ.
ಈ ಕುರಿತು ಸರಕಾರಕ್ಕೆ ನೀಡಿದ್ದ ದೂರುಗಳನ್ನು ಪರಿಶೀಲಿಸಿದ ಸರಕಾರ ಈ ಕುರಿತು ಆದೇಶ ಹೊರಡಿಸಿದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರದ ಆದೇಶದ ಸಂಖ್ಯೆ ಯೋ.ಇ.54/ಯೋ,ವಿ.ವಿ-2013 ದಿ.6-7-2013ರಲ್ಲಿ ಸಂಸದರು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಭಾವಚಿತ್ರಗಳನ್ನು ಅಳವಡಿಸಲು ಅವಕಾಶ ಇರುವುದಿಲ್ಲ.
ಇನ್ನು ಮುಂದೆ ಇಂಥ ಘಟನೆಗಳು ಜರುಗದಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಲು ಗಡಾದ ಒತ್ತಾಯಿಸಿದ್ದಾರೆ.