Kshetra Samachara
ಕಡಬ : ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟದಿಂದಾಗಿ ಕೆರೆ, ನದಿ,ಬಾವಿ, ಹಳ್ಳ ಕೊಳ್ಳಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ಕೆರೆ ತನ್ನ ಸುತ್ತಮುತ್ತಲಿನ ಅದೆಷ್ಟೋ ಬಾವಿಗಳಿಗೆ ಮರುಜೀವ ನೀಡಿದೆ.
ಅನಾದಿ ಕಾಲದಿಂದಲೂ ಇದ್ದ ಒಂದು ಕೆರೆ ಕಾಲಾಂತರದಲ್ಲಿ ಸಂಪೂರ್ಣ ಮಾಯವಾಗಿ ಸಮತಟ್ಟಾದ ಮೈದಾನದಂತಾಗಿದ್ದು,ಅಲ್ಲೊಂದು ಕೆರೆ ಇತ್ತು ಎಂಬುದೇ ಎಷ್ಟೋ ಜನರಿಗೆ ತಿಳಿದಿರಲಿಲ್ಲ. ಯಾವಾಗ 2016-17 ರಲ್ಲಿ ಉದ್ಯೋಗ ಖಾತ್ರಿ ಯೋಜನೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಜಂಟಿಯಾಗಿ ಕಾಮಗಾರಿ ಕೈಗೆತ್ತಿಕೊಂಡು ಅದಕ್ಕೊಂದು ಹೊಸ ರೂಪು ಕಲ್ಪಿಸಿದರೋ ಆಗಲೇ ಕೆರೆ ಮರುಹುಟ್ಟು ಪಡೆಯಿತು. ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ದೊಡ್ಡ ಕೆರೆಯ ಕಥೆ. ಉದ್ಯೋಗ ಖಾತ್ರಿ ಯೋಜನೆಯ ಸುಮಾರು 27 ಲಕ್ಷ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 5 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನಗೊಂಡಿತು.
ಈ ಕೆರೆಯ ಪುನಶ್ಚೇತನದಿಂದಾಗಿ ಸುತ್ತಮುತ್ತಲಿನ ಸುಮಾರು 100-150 ಖಾಸಗಿ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿ ಯಾವತ್ತೂ ನೀರಿನ ಅಭಾವ ತಲೆದೋರಿಲ್ಲ. ಸದಾ ಕಾಲ ಬೇಸಿಗೆಯಲ್ಲಿ ಬರಿದಾಗುತ್ತಿದ್ದ ಒಂದು ಕೊಳವೆ ಬಾವಿಯು ಇದೀಗ ಎಂದೂ ಬರಿದಾಗದೇ ವರ್ಷವಿಡೀ ನೀರು ಹೊರಹೊಮ್ಮತ್ತದೆ ಎನ್ನುತ್ತಾರೆ ರಾಮಕುಂಜ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು.
ಒಟ್ಟಿನಲ್ಲಿ ಜಲಮೂಲಗಳ ಬಗ್ಗೆ ನಿರ್ಲಕ್ಷ್ಯ ವಹಿಸಿ ಮಾಲಿನ್ಯ ಮಾಡುವ ಪ್ರಸಂಗಗಳೇ ಹೆಚ್ಚಿರುವ ಇಂದಿನ ದಿನಗಳಲ್ಲಿ ಸಂಪೂರ್ಣ ಕಣ್ಮರೆಯಾಗಿದ್ದ ಕೆರೆಯೊಂದಕ್ಕೆ ಮರುಹುಟ್ಟು ನೀಡಿ ನೀರಿನ ಅಭಾವ ತಡೆಗಟ್ಟಿದ್ದಲ್ಲದೇ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ರಾಮಕುಂಜ ಗ್ರಾಮ ಪಂಚಾಯತ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಯ ಶ್ಲಾಘನೀಯ.
ಜಲಜೀವನ್ ಮಿಷನ್ ಯೋಜನೆಯ ಪ್ರಮುಖ ಭಾಗವಾದ (ಗುರಿ) ಅಂತರ್ಜಲ ಪುನಶ್ಚೇತನ ಮತ್ತು ಜಲಮೂಲಗಳ ಸಂರಕ್ಷಣೆಯ ವಿಶೇಷ ಆಂದೋಲನಕ್ಕೆ ಈ ಕೆರೆಯ ಕೊಡುಗೆ ಅಪಾರ. ಮುಂಬರುವ ದಿನಗಳಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಈ ಕೆರೆಯ ನಿರಂತರ ರಕ್ಷಣೆಯಲ್ಲಿ ನಾವೆಲ್ಲ ಶ್ರಮಿಸುತ್ತೇವೆ ಎನ್ನುತ್ತಾರೆ. ಗ್ರಾಮಸ್ಥರು ಎಂದು ದ.ಕ ಜಿಲ್ಲಾ ಜೆಜೆಎಮ್ ಐಇಸಿ ಸಂಯೋಜಕ
ಮಹಾಂತೇಶ್ ಹಿರೇಮಠ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ