Public News
ಬೆಂಗಳೂರು: ಸಿಎಂ ಯಡಿಯೂರಪ್ಪ ಅವರಿಗೆ ಮೂರು ದಿನಗಳ ಅಗ್ನಿ ಪರೀಕ್ಷೆ ಶುರುವಾಗಲಿದೆ. ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಜೂ.16 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಅವರೊಬ್ಬರೇ ಬಂದು ಶಾಸಕರ ಅಭಿಪ್ರಾಯ ಸಂಗ್ರಹಿಸಿದರೆ ಏಕಾಭಿಪ್ರಾಯ ವ್ಯಕ್ತವಾಗಬಹುದು. ಹಾಗಾಗಿ ಕನಿಷ್ಠ ಇಬ್ಬರು ನಾಯಕರನ್ನು ಹೈಕಮಾಂಡ್ ಕಳುಹಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆದರೆ ಹೈಕಮಾಂಡ್ ಈ ಬಗ್ಗೆ ಇನ್ನು ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು 2011ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇದೇ ಮಾದರಿಯಲ್ಲಿ ಶಾಸಕಾಂಗ ಸಭೆ ಕರೆಯುವಂತೆ ಒತ್ತಾಯ ಬಂದಿತ್ತು. ಅಂದಿನ ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜನಾಥ್ ಸಿಂಗ್ ಹಾಗು ಅನಂತ ಕುಮಾರ್ ಅವರು ಖಾಸಗಿ ಹೋಟೆಲ್ ನಲ್ಲಿ ಶಾಸಕರನ್ನು ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಸಂಗ್ರಹಿಸಿದ್ದರು. ಈಗಲೂ ಕೂಡ ಇದೇ ಮಾಡೆಲ್ ಅನುಸರಿಸಲು ಹೈಕಮಾಂಡ್ ಮುಂದಾಗಿದೆ.
ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಶಾಸಕರನ್ನು ಪ್ರತ್ಯೇಕವಾಗಿ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಪಡೆಯಲಿದ್ದಾರೆ ಅರುಣ್ ಸಿಂಗ್. ಈ ಹಿನ್ನಲೆಯಲ್ಲಿ ಜೂನ್ 16 ರ ಮಧ್ಯಾಹ್ನ ದಿಂದ ಜೂನ್ 17 ರ ಸಂಜೆಯ ತನಕ 92 ಶಾಸಕರ ಅಭಿಪ್ರಾಯ ಪಡೆಯಲಿದ್ದಾರೆ. ಆ ಬಳಿಕ ಜೂನ್ 17 ರ ಸಂಜೆ ಯಿಂದ 18 ರ ಸಂಜೆಯ ತನಕ ಸಚಿವರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.