Kshetra Samachara
ಮುಲ್ಕಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಪಂ ವ್ಯಾಪ್ತಿಯ ಉಳೆಪಾಡಿ ಪುರಂಜ ಗುಡ್ಡೆ ಎಂಬಲ್ಲಿ ಮನೆಯಲ್ಲಿ ವಿದ್ಯುತ್ ಪ್ರವಹಿಸಿ ಮನೆ ಯಜಮಾನ ದಾರುಣ ಸಾವನ್ನಪ್ಪಿದ ಘಟನೆ ನಡೆದಿದೆ. ಮಾಧವ ಆಚಾರ್ಯ (55) ಮೃತಪಟ್ಟವರು.
ಶನಿವಾರ ಸಂಜೆ ಭಾರಿ ಮಳೆ- ಗಾಳಿಯಿಂದ ಮಾಧವ ಅವರ ಮನೆ ಮೇಲೆ ಮರದ ಗೆಲ್ಲು ಬಿದ್ದಿದ್ದು, ವಿದ್ಯುತ್ ಕಡಿತಗೊಂಡಿತ್ತು. ಈ ಬಗ್ಗೆ ಕಿನ್ನಿಗೋಳಿ ಮೆಸ್ಕಾಂ ಸಂಪರ್ಕಿಸಿದಾಗ ಸಿಬ್ಬಂದಿ ಮರದ ಗೆಲ್ಲು ಕಡಿಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಆಗ ಮನೆಯವರೇ ಗೆಲ್ಲು ತುಂಡರಿಸಿದ್ದು, ಭಾನುವಾರ ಮೆಸ್ಕಾಂ ಸಿಬ್ಬಂದಿ ಬಂದು ತಾತ್ಕಾಲಿಕ ನೆಲೆಯಲ್ಲಿ ಮನೆಯೆದುರಿನ ಭಾಗದಲ್ಲಿ ವಿದ್ಯುತ್ ವಯರ್ ಸಿಕ್ಕಿಸಿ ಮನೆಯವರಿಗೆ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿ, ತೆರಳಿದ್ದರು.
ಮೆಸ್ಕಾಂ ಸಿಬ್ಬಂದಿ ಹೋದ ಮೇಲೆ ಮನೆಯವರು ಗಾಳಿ- ಮಳೆಯಿಂದ ಹಾನಿಗೀಡಾದ ಮನೆಯ ಹಂಚನ್ನು ಸರಿಪಡಿಸಲು ಮುಂದಾಗಿ ಸಂಬಂಧಿಕ ಜನಾರ್ದನ ಆಚಾರ್ಯ ಅವರು ಮೇಲ್ಗಡೆ ಏಣಿ ಇಟ್ಟಾಗ ಆಯ ತಪ್ಪಿ ಏಣಿ ವಿದ್ಯುತ್ ವಯರ್ ಗೆ ಟಚ್ ಆಗಿದೆ ಎನ್ನಲಾಗಿದೆ. ಈ ಸಂದರ್ಭ ಏಣಿ ಮೇಲೆ ನಿಂತಿದ್ದ ವ್ಯಕ್ತಿ ಕೆಳಗೆ ಬೀಳುವ ಹಂತದಲ್ಲಿದ್ದಾಗ ಮಾಧವ ಆಚಾರ್ಯ ಏಣಿಯನ್ನು ಹಿಡಿದಿದ್ದು, ವಿದ್ಯುತ್ ಪ್ರವಹಿಸಿ ಪ್ರಜ್ಞೆ ತಪ್ಪಿ ಬಿದ್ದರು. ಕೂಡಲೇ ಅವರನ್ನು ಕಿನ್ನಿಗೊಳಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.
ಮೆಸ್ಕಾಂ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮೃತರು ಮರದ ಕೆಲಸ ಮತ್ತು ಬಾವಿಗೆ ನೀರು ನೋಡುವ ತಜ್ಞರಾಗಿದ್ದು, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ. ಸ್ಥಳಕ್ಕೆ ಐಕಳ ಗ್ರಾಪಂ ಸದಸ್ಯ ರಾಜೇಶ್ ಶೆಟ್ಟಿ, ಮಾಜಿ ಅಧ್ಯಕ್ಷ ದಿವಾಕರ ಚೌಟ ಭೇಟಿ ನೀಡಿ, ಮನೆಮಂದಿಗೆ ಸಾಂತ್ವನ ಹೇಳಿದರು.