Kshetra Samachara
ಮಂಗಳೂರು: ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ 17 ಗ್ರಾಮಗಳು ಜೂನ್ 14ರ ಬೆಳಗ್ಗೆ 9ರಿಂದ ಜೂನ್ 21ರ ಬೆಳಗ್ಗೆ 9ರ ವರೆಗೆ ಸಂಪೂರ್ಣ ಸೀಲ್ ಡೌನ್ ಆಗಲಿದೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶಿಸಿದ್ದಾರೆ.
ದ.ಕ. ಜಿಪಂ ಸಿಇಒ ವರದಿ ಆಧರಿಸಿ 50ಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗಿರುವ ಗ್ರಾಪಂಗಳನ್ನು ಸೀಲ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಮಂಗಳೂರಿನ ಕೊಣಾಜೆ, ನೀರುಮಾರ್ಗ, ಬೆಳ್ತಂಗಡಿಯ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ, ಸುಳ್ಯ ತಾಲೂಕಿನ ಐವರ ನಾಡು, ಅಮರಮುಡ್ನೂರು, ಕೊಲ್ಲಮೊಗರು, ಗುತ್ತಿಗಾರು, ಅರಂತೋಡು ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯ ಹಾಗೂ ಸವಣೂರು ಸಹಿತ 17 ಗ್ರಾಮಗಳು ಮುಂದಿನ ಏಳು ದಿನಗಳ ಕಾಲ ಸಂಪೂರ್ಣ ಸೀಲ್ ಡೌನ್ ಆಗಲಿದೆ.
ಸೀಲ್ ಡೌನ್ ಆಗಿರುವ ಈ ಗ್ರಾಮಗಳಿಗೆ ಹೊರಗಿನಿಂದ ಬರುವವರಿಗೆ ಹಾಗೂ ಹೊರ ಹೋಗುವವರಿಗೆ ಕೆಲವೊಂದು ನಿಬಂಧನೆ ವಿಧಿಸಲಾಗಿದೆ. ನರ್ಸಿಂಗ್ ಹೋಮ್, ಕ್ಲಿನಿಕ್, ವೈದ್ಯಕೀಯ ಹಾಗೂ ತುರ್ತು ಸೇವೆಗಳ ವಾಹನ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಅಲ್ಲದೆ, ಗ್ರಾಮಸ್ಥರಿಗೆ ಅಗತ್ಯ ವಸ್ತು ಪೂರೈಸಲು ಗ್ರಾಮಪಡೆಗಳ ಸಿದ್ಧತೆ ಮಾಡಲಾಗಿದೆ. ನಾಗರಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.