ER NEWS
ಕಾಂಗ್ರೆಸ್ನ ಹಿರಿಯ ಮುಖಂಡರು ಹಾಗೂ ಶಾಸಕರಾದ ಎ.ಬಿ.ಮಾಲಕ ರೆಡ್ಡಿ ಹಾಗೂ ಮಾಲಿಕಯ್ಯ ಗುತ್ತೇದಾರ್ ಸದ್ಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟ ಪುನಾರಚನೆ ಸಂದರ್ಭದಲ್ಲಿ ಈ ಇಬ್ಬರಿಗೂ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ವಿರುದ್ದ ತೀವ್ರ ಅಸಮಾಧಾನಗೊಂಡಿದ್ದರು.
ಎಐಸಿಸಿ ಮುಖಂಡ ಹಾಗೂ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸದ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ರಾಜಕೀಯ ಭವಿಷ್ಯ ನೆಲೆ ಕಂಡುಕೊಳ್ಳುವ ದೃಷ್ಟಿಕೋನದ ಕಾರಣ ಬಿಜೆಪಿ ಸೇರಲು ಮುಂದಾಗಿರುವ ಇವರು ಬಿಜೆಪಿ ಪಕ್ಷದ ಉಸ್ತುವಾರಿ ಮುರುಳೀಧರ್ ರಾವ್ ಅವರೊಂದಿಗೆ ಹೈದರಾಬಾದ್ನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವೀ ಮುಖಂಡರಾಗಿರುವ ಎ.ಬಿ.ಮಾಲಕರೆಡ್ಡಿ ಮತ್ತು ಮಾಲೀಕಯ್ಯ ಗುತ್ತೇದಾರ್ ಅವರು ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಮಾಲಕ ರೆಡ್ಡಿ ಅವರು ಐದು ಬಾರಿ ಶಾಸಕರಾಗಿ ಎಸ್.ಎಂ.ಕೃಷ್ಣ ಅವರ ಆಡಳಿತದಲ್ಲಿ ವೈದ್ಯಕೀಯ ಸಚಿವರಾಗಿದ್ದರು.
ಮಾಲೀಕಯ್ಯ ಗುತ್ತೇದಾರ್ ಅವರು ಆರು ಬಾರಿ ಶಾಸಕರಾಗಿದ್ದರು. ಈ ಇಬ್ಬರಿಗು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಎರಡನೇ ಬಾರಿ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಇವರನ್ನು ಪರಿಗಣಿಸಿರಲಿಲ್ಲ. ಆಗಲೇ ಇವರು ತಮ್ಮ ಅಸಮಾಧಾನ ಹೊರಹಾಕಿದ್ದರು. ತಾತ್ಕಾಲಿಕವಾಗಿ ಅತೃಪ್ತಿ ಶಮನಗೊಂಡಿತ್ತಾದರೂ ಪಕ್ಷ ತೊರೆಯುವ ನಿರ್ಧಾರ ಅಚಲವಾಗಿದೆ ಎಂದು ಹೇಳಲಾಗಿದ್ದು , ಬಿಜೆಪಿ ಸೇರಲು ಮುಂದಾಗಿರುವ ಇವರು ಬಿಜೆಪಿ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.