ER NEWS
-ಲಿಂಗಾಯಿತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಉಡುಪಿ ಕೃಷ್ಣ ಮಠದ ಪೇಜಾವರ ಶ್ರೀಗಳು ಪದೇ ಪದೇ ತಲೆ ಹಾಕುವುದು ಬೇಡ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ, ಲಿಂಗಾಯಿತ ಸಮಾಜದ ಮುಖಂಡ ವಿನಯ್ ಕುಲಕರ್ಣಿ ಹೇಳಿದ್ದಾರೆ. ಧಾರವಾಡದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನಮ್ಮ ಸಮುದಾಯದಲ್ಲಿ ಮಠಮಂದಿರಗಳಿವೆ. ಸ್ವಾಮೀಜಿಗಳಿದ್ದಾರೆ. ನಮ್ಮ ಧರ್ಮದ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪ್ರತ್ಯೇಕ ಲಿಂಗಾಯಿತ ಹೋರಾಟ ವಿಚಾರದ ಬಗ್ಗೆ ಪೇಜಾವರ ಶ್ರೀಗಳು ತಲೆಕೆಡಿಸಿಕೊಳ್ಳುವುದು ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಲಿಂಗಾಯಿತ ಸಮುದಾಯ ಒಂದು ವಿಭಿನ್ನ ಸಮುದಾಯ. ನಮ್ಮಲ್ಲಿ ಪ್ರತ್ಯೇಕ ಲಿಂಗಾಯಿತ ಧರ್ಮಕ್ಕಾಗಿ ಹೋರಾಟ ನಡೆಯುತ್ತಿದೆ. ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿರುವ ಲಿಂಗಾಯಿತ ಧರ್ಮಕ್ಕೆ ಮಾನ್ಯತೆ ನೀಡಬೇಕೆಂದು ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ನಾಡಿನ ಲಿಂಗಾಯಿತ ಮಠಾಧೀಶರು ಇದಕ್ಕೆ ಬೆಂಬಲ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಮೂಗು ತೂರಿಸುವ ಅಗತ್ಯವಿಲ್ಲ. ಇದು ಅವರಿಗೆ ಸಂಬಂಧಿಸಿದ ವಿಷಯವೂ ಅಲ್ಲ ಎಂದು ಹೇಳಿರುವ ವಿನಯ್ ಕುಲಕರ್ಣಿ ಅವರು ನಮ್ಮ ಸಮಾಜದ ಬಗ್ಗೆ ನಮಗೆ ಅರಿವಿದೆ. ಅದನ್ನು ತಿಳಿಸಿಕೊಡಲು ನಮ್ಮ ಸಮಾಜದ ಮಠಾಧೀಶರು ಇದ್ದಾರೆ ಎಂದು ಹೇಳಿದ್ದಾರೆ.