ER NEWS

News Subject: 
ಕಲ್ಯಾಣಮಸ್ತು: ಅರ್ಚಕರನ್ನು ಮದುವೆಯಾದರೆ 3 ಲಕ್ಷ ರೂ. !
Upload Image: 
Body: 

ದೇವಸ್ಥಾನಗಳಲ್ಲಿ ಅರ್ಚಕರಾಗಿ ಕೆಲಸ ಮಾಡುವ ಯುವಕರನ್ನು ಮದುವೆಯಾಗುವ ಮಹಿಳೆಯರಿಗೆ 3 ಲಕ್ಷ ರೂ. ಗಳನ್ನು ನೀಡಲು ತೆಲಂಗಾಣ ಸರಕಾರ ನಿರ್ಧರಿಸಿದೆ. "ಕಲ್ಯಾಣಮಸ್ತು' ಎಂಬ ಹೆಸರಿನ ಈ ಯೋಜನೆ ಮುಂದಿನ ತಿಂಗಳಿಂದಲೇ ಜಾರಿಗೆ ಬರಲಿದೆ. ದೇವಸ್ಥಾನಗಳ ಅರ್ಚಕರು ಹಾಗೂ ಪುರೋಹಿತರಿಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಕನ್ಯಾಪಿತೃಗಳು ಹಿಂದೇಟು ಹಾಕುತ್ತಾರೆ. ಆದಾಯ ಕಡಿಮೆ ಇರುವುದೂ ಒಂದು ಕಾರಣ ಎಂಬುದನ್ನು ಮನಗಂಡಿರುವ ಸರಕಾರ, ಅರ್ಚಕರನ್ನು ವರಿಸಲು ಮುಂದಾಗುವವರಿಗೆ ಇಂಥ ಆಫ‌ರ್‌ ನೀಡಿದೆ. ಇದರೊಂದಿಗೆ, ಮದುವೆ ಸಮಾರಂಭ ನೆರವೇರಿಸಲು ಯುವತಿಯ ಮನೆಯವರಿಗೂ ಒಂದು ಲಕ್ಷ ರೂ.ಗಳನ್ನು ಸರಕಾರವೇ ಕೊಡಲಿದೆ!

ಏಕೀ ಯೋಜನೆ ?
ವರಾನ್ವೇಷಣೆ ವೇಳೆ ಗಂಡಿನ ಆದಾಯ ವನ್ನೇ ಪ್ರಧಾನವಾಗಿ ನೋಡುತ್ತಿರುವು ದರಿಂದ ದೇವಸ್ಥಾನದ ಅರ್ಚಕರಿಗೆ ಹಾಗೂ ಪುರೋಹಿತರಿಗೆ ಕನ್ಯೆ ಸಿಗುವುದೇ ಕಷ್ಟ ವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಚಕರ ವಿವಾಹಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ದಂಪತಿಯ ಜಂಟಿ ಖಾತೆಯಲ್ಲಿ 3 ಲಕ್ಷ ರೂ.ಗಳ ನಿರಖು ಠೇವಣಿ ಇರಿಸುವ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ, ಮದುವೆ ಖರ್ಚಿಗೆಂದು ಹೆಣ್ಣಿನ ಮನೆಯವರಿಗೆ 1 ಲಕ್ಷ ರೂ. ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಲ ಬದಲಾಗಿದೆ. ಹುಡುಗಿಯರು ಮಹತ್ವಾಕಾಂಕ್ಷಿಗಳಾಗಿದ್ದು, ತಮ್ಮ ಸಂಗಾತಿ ಆಯ್ಕೆ ವಿಚಾರದಲ್ಲಿ ಬಹಳ ಚ್ಯೂಸಿಯಾಗಿ ದ್ದಾರೆ. ಉದ್ಯೋಗದ ಅನಿಶ್ಚಿತತೆಯಿಂದಾಗಿ ಸಾಫ್ಟ್ವೇರ್‌ ಎಂಜಿನಿಯರ್‌ಗಳಿಗೂ ಹುಡುಗಿ ಸಿಗುವುದು ಕಷ್ಟವಾಗಿರುವಾಗ, ಹೆಚ್ಚು ಆದಾಯ ಹಾಗೂ ಗೌರವದ ವೃತ್ತಿ ಯಾಗಿಲ್ಲದ ಅರ್ಚಕರಿಗೆ ಸೂಕ್ತ ಸಂಗಾತಿ ದುರ್ಲಭ ಎಂಬ ಸ್ಥಿತಿ ಇದೆ ಎಂದು ಮುಖ್ಯ ಮಂತ್ರಿಗಳ ಸಲಹೆಗಾರರೂ ಆಗಿರುವ ತೆಲಂಗಾಣ ಬ್ರಾಹ್ಮಣ ಸಂಕ್ಷೇಮ ಪರಿಷದ್‌ ಅಧ್ಯಕ್ಷ ಕೆ.ವಿ. ರಮಣಾಚಾರಿ ತಿಳಿಸಿದ್ದಾರೆ. ತಮ್ಮ ಮಗಳನ್ನು ದೇವಸ್ಥಾನದ ಅರ್ಚಕ ರಿಗೆ ಮದುವೆ ಮಾಡಿಕೊಡಲು ಯಾರೂ ಮುಂದಾಗುತ್ತಿಲ್ಲ. ಇದರ ಪರಿಣಾಮ ಹಲವು ವರ್ಷಗಳ ಕಾಲ ಅಸಂಖ್ಯ ಅರ್ಚಕರು ಬ್ರಹ್ಮಚಾರಿಗಳಾಗಿಯೇ ಬದುಕು ವಂತಾಗಿದೆ. ಈ ಯೋಜನೆ ಅರ್ಚಕರಿಗೆ ಒಂದಿಷ್ಟು ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಜತೆಗೆ, ಅವರನ್ನು ವರಿಸಲು ಕನ್ಯೆಯರು ಮುಂದೆ ಬರಲಿ ಎನ್ನುವ ಉದ್ದೇಶ ಹೊಂದಿದೆ ಎಂದರು.

ಜಾರಿ ಹೇಗೆ?
ಕಲ್ಯಾಣಮಸ್ತು ಯೋಜನೆ ನವೆಂಬರ್‌ ತಿಂಗಳಲ್ಲಿ ಜಾರಿಗೆ ಬರಲಿದೆ. ರಾಷ್ಟ್ರೀಕೃತ ಬ್ಯಾಂಕ್‌ ಒಂದರಲ್ಲಿ ವಧು-ವರರ ಹೆಸರಿ ನಲ್ಲಿ ಜಂಟಿ ಖಾತೆ ತೆರೆದು ಮೂರು ವರ್ಷಗಳ ಅವಧಿಗೆ 3 ಲಕ್ಷ ರೂ. ನಿರಖು ಠೇವಣಿ ಇರಿಸಲಾಗುವುದು. ಅರ್ಚಕರನ್ನು ಮದುವೆಯಾಗುವ ಹುಡುಗಿಗೆ ಉತ್ತೇಜನ ನೀಡುವ ಜತೆಗೆ, ಅವರ ಸಂಸಾರಕ್ಕೆ, ಮಕ್ಕಳ ಪೋಷಣೆಗೆ ಕಷ್ಟ ಬಾರದಿರಲಿ ಎಂಬ ಸದಾಶಯವನ್ನು ಈ ಹೊಸ ಯೋಜನೆ ಒಳ ಗೊಂಡಿದೆ ಎಂದು ರಮಣಾಚಾರಿ ವಿವರಿಸಿದರು.

ಅರ್ಜಿ ಸಲ್ಲಿಸಿ
ದೇವಸ್ಥಾನದ ಅರ್ಚಕರಿಗೆ ತಮ್ಮ ಪುತ್ರಿಯನ್ನು ವಿವಾಹ ಮಾಡಿಕೊಡಲು ಇಚ್ಛಿಸುವ ಪೋಷಕರು ವಧು ಹಾಗೂ ವರನ ವಿವರಗಳೊಂದಿಗೆ ಈ ಯೋಜನೆಯ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಡಿ ಎಷ್ಟು ಜೋಡಿಗಳಾದರೂ ಸೌಲಭ್ಯ ಪಡೆಯಬಹುದು. ಎಲ್ಲ ಅರ್ಹ ಅರ್ಜಿದಾರರಿಗೆ ಮದುವೆ ಸಹಾಯಧನ ಹಾಗೂ ವಿವಾಹ ವೆಚ್ಚದ ಹಣವನ್ನು ಕೊಡಲಾಗುತ್ತದೆ ಎಂದರು.

ಅರ್ಚಕರಿಗೂ ವೇತನಶ್ರೇಣಿ
ರಾಜ್ಯದಲ್ಲಿರುವ 4,805 ದೇವಸ್ಥಾನಗಳ ಅರ್ಚಕರು ರಾಜ್ಯ ಸರಕಾರ ನಿಗದಿಗೊಳಿಸಿದ ವೇತನ ಶ್ರೇಣಿಯಂತೆ ಸಂಬಳ ಪಡೆಯ ಲಿದ್ದಾರೆ ಎಂದು ತೆಲಂಗಾಣ ಸರಕಾರ ಈ ಹಿಂದೆಯೇ ಘೋಷಿಸಿತ್ತು. ದೇವಸ್ಥಾನಗಳ ಎಲ್ಲ ಅರ್ಚಕರು ಹಾಗೂ ಸಿಬಂದಿ ಪ್ರತಿ ತಿಂಗಳ ಮೊದಲ ದಿನವೇ ಬೇರೆಲ್ಲ ಸರಕಾರಿ ನೌಕರರಂತೆಯೇ ವೇತನ ಪಡೆಯಲಿದ್ದಾರೆ. ಸರಕಾರಿ ನೌಕರರ ಜತೆಗೇ ಅವರ ವೇತನ ವನ್ನೂ ಪರಿಷ್ಕರಿಸಲಾಗುವುದು ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಕಳೆದ ತಿಂಗಳು ಪ್ರಕಟಿಸಿದ್ದರು. ವೇತನ ಶ್ರೇಣಿಯಿಂದಾಗಿ ಅರ್ಚಕರೂ ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ ಗಳಿಸಲಿದ್ದಾರೆ. ಕಲ್ಯಾಣಮಸ್ತು ಯೋಜನೆ ಅವರನ್ನು ಆರ್ಥಿಕವಾಗಿ ಇನ್ನಷ್ಟು ಸಬಲಗೊಳಿಸುವ ಜತೆಗೆ, ಸೂಕ್ತ ಸಂಗಾತಿ ಸಿಗು ವಂತೆ ಮಾಡುತ್ತದೆ ಎಂದು ರಮಣಾಚಾರಿ ಹೇಳಿದರು.

Reach Count: 
1