ER NEWS
ಗುಜರಾತ್ನಲ್ಲಿ ಗೆಲ್ಲುವ ಮೂಲಕ ತವರು ರಾಜ್ಯದಲ್ಲೇ ನರೇಂದ್ರ ಮೋದಿ- ಅಮಿತ್ ಶಾ ಜೋಡಿಗೆ ಮುಖಭಂಗ ಮಾಡಬೇಕೆಂದು ಹಠ ತೊಟ್ಟಿರುವ ಕಾಂಗ್ರೆಸ್ ಈ ಗುರಿ ಸಾಧಿಸಿಕೊಳ್ಳಲು ಚಿಕ್ಕಪುಟ್ಟ ಪಕ್ಷಗಳನ್ನು ಸೇರಿಸಿಕೊಂಡು ಮಹಾಮೈತ್ರಿಕೂಟ ರಚಿಸಲು ಪ್ರಯತ್ನಿಸುತ್ತಿದೆ. ಜನತಾ ದಳ (ಯು) ಬಂಡಾಯ ನಾಯಕ ಛೋಟು ವಾಸವ, ಪಟಿದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್, ಒಬಿಸಿ ನಾಯಕ ಅಲ್ಪೇಶ್ ಠಾಕೂರ್, ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಈ ಮಹಾ ಮೈತ್ರಿಕೂಟದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿದೆ.
ಗುಜರಾತಿನಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿ ಕೂಟ ರಚನೆಯಾಗುತ್ತಿರುವುದನ್ನು ರಾಜ್ಯದ ಕಾಂಗ್ರೆಸ್ನಾಯಕರೊಬ್ಬರು ದೃಢಪಡಿಸಿದ್ದಾರೆ. ಮಹಾಮೈತ್ರಿ ಕೂಟ ರಚನೆಯಾಗುತ್ತಿರುವುದ ನಿಜ. ಇದಕ್ಕಾಗಿಯೇ ರಾಹುಲ್ ಗಾಂಧಿ ಮುಂದಿನ ತಿಂಗಳು ಗುಜರಾತ್ಗೆಆಗಮಿಸಲಿದ್ದಾರೆ. ಆದರೆ ಮೈತ್ರಿಯ ಸ್ವರೂಪ ಹೇಗಿರುತ್ತದೆ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ. ಮಹಾ ಮೈತ್ರಿ ಕೂಟ ರಚನೆಯಾದರೆ ಸೀಟು ಹಂಚಿಕೆಯ ಮೇಲೆ ಪ್ರಭಾವವಾಗುತ್ತದೆ ಎಂದವರು ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ಗೆ ಮತ ಹಾಕಿ ಬಂಡಾಯದ ಬಾವುಟ ಹಾರಿಸಿರುವ ಛೋಟು ವಾಸವ ಮಹಾಮೈತ್ರಿಕೂಟ ರಚಿಸುವ ನಿಟ್ಟಿನಲ್ಲಿ ಗುಜರಾತ್ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹೊÉàಟ್, ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತ್ ಸೋಳಂಕಿ ಜತೆಗೆ ಮಾತುಕತೆ ನಡೆಸಿದ್ದಾರೆ. ಬುಡಕಟ್ಟು ಸಮೂಹದ ಪ್ರಬಲ ನಾಯಕ ವಾಸವ ಗುಜರಾತಿ ನಲ್ಲಿ ಜೆಡಿ(ಯು) ಮುಖವಾಗಿ ಗುರುತಿಸಿಕೊಂಡಿದ್ದಾರೆ. ಶರದ್ ಯಾದವ್ ನೇತೃತ್ವದ ಜೆಡಿ(ಯು) ಬಣ ಅವರನ್ನು ಇತ್ತೀಚೆಗೆ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮಾತುಕತೆಯ ಜವಾಬ್ದರಿ ವಹಿಸಿದೆ. ಈ ಸಲ ಗುಜರಾತಿನಲ್ಲಿ ಬಿಜೆಪಿ ಆಳ್ವಿಕೆಯನ್ನು ಕೊನೆಗಾಣಿಸಿ ಮೋದಿ -ಶಾ ಜೋಡಿಗೆ ತವರು ರಾಜ್ಯದಲ್ಲೇ ಮುಖಭಂಗ ಮಾಡುವ ಮೂಲಕ 2019ರ ಲೋಕಸಭಾ ಚುನಾವಣೆಗೆ ಆತ್ಮಸ್ಥೈರ್ಯ ಹೆಚ್ಚಸಿಕೊಳ್ಳಲು ಕಾಂಗ್ರೆಸ್ ತೀವ್ರ ಪ್ರಯತ್ನ ಮಾಡುತ್ತಿದೆ. ಉಪಾಧ್ಯಕ್ಷ ರಾಹುಲ್ ಗಾಂಧಿ ಪದೇ ಪದೇ ಗುಜರಾತ್ಗೆ ಭೇಟಿ ನೀಡಿ ಕಾರ್ಯಕರ್ತರಲ್ಲಿ ಹುರಪು ತುಂಬುವ ಕೆಲಸ ಮಾಡುತ್ತಿದ್ದಾರೆ.