ER NEWS
ಈ ವರ್ಷದ ಆಗಸ್ಟ್ನಲ್ಲಿ ಏಕ ಸದಸ್ಯ ನ್ಯಾಯಪೀಠವು ಎಸ್. ಶ್ರೀಶಾಂತ್ ಪರ ನೀಡಿರುವ ತೀರ್ಪಿನ ವಿರುದ್ಧವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿರುವ ಮನವಿಯನ್ನು ಪುರಸ್ಕರಿಸಿರುವ ಕೇರಳ ಹೈಕೋರ್ಟ್, ಈ ಬಲಗೈ ವೇಗಿ ಮೇಲಿನ ಆಜೀವ ನಿಷೇಧವನ್ನು ಎತ್ತಿ ಹಿಡಿದಿದೆ.
ಕೇರಳ ಹೈಕೋರ್ಟ್ನ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಈ ಹಿಂದೆ ಆಗಸ್ಟ್ನಲ್ಲಿ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಲಾಗಿತ್ತು. ಆದರೆ ಬಿಸಿಸಿಐ ಮಾತ್ರ ನಿಷೇಧ ಹಿಂಪಡೆಯಲು ನಿರಾಕರಿಸಿತ್ತಲ್ಲದೆ ತೀರ್ಪು ಪ್ರಶ್ನಿಸಿ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು.
ಮುಖ್ಯ ನ್ಯಾಯಮೂರ್ತಿ ನವ್ನೀತಿ ಪ್ರಸಾದ್ ಸಿಂಗ್ ನೇತೃತ್ವದ ವಿಭಾಗೀಯ ಪೀಠ ನೀಡಿರುವ ತೀರ್ಪಿನಲ್ಲಿ, ಬಿಸಿಸಿಐ ವಿಧಿಸಿರುವ ನಿಷೇಧದ ವಿರುದ್ಧ ನ್ಯಾಯಾಲಯವು ನ್ಯಾಯಾಂಗ ವಿಮರ್ಶೆ ಮಾಡಲು ಸಾಧ್ಯವಿಲ್ಲ ಎಂದಿದೆ. ಇದರೊಂದಿಗೆ ಭಾರತ ಕ್ರಿಕೆಟ್ ತಂಡ ಸೇರಿದಂತೆ ಕೇರಳ ರಣಜಿ ತಂಡಕ್ಕೂ ಪುನರಾಗಮಿಸುವ ಶ್ರೀ ಕನಸಿಗೆ ಭಗ್ನವುಂಟಾಗಿದೆ. ಹಾಗೆಯೇ ಬಿಸಿಸಿಐ ಅಥವಾ ಕೇರಳ ರಾಜ್ಯ ಕ್ರಿಕೆಟ್ ಸಂಸ್ಥೆಯ ಪರಿಧಿಗೆ ಒಳಪಟ್ಟ ಯಾವುದೇ ಮೈದಾನದಲ್ಲೂ ಅಭ್ಯಾಸವನ್ನು ಮಾಡುವಂತಿಲ್ಲ.
ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಸಂಬಂಧ ಶ್ರೀಶಾಂತ್ ಅಜೀವ ನಿಷೇಧಕ್ಕೊಳಗಾಗಿದ್ದರು.