ER NEWS
ವಿಧಾನಸೌಧದ ವಜ್ರ ಮಹೋತ್ಸವವನ್ನು ಸರಳವಾಗಿ ಆಚರಿಸೋಣ. ಅನಾವಶ್ಯಕ ದುಂದುವೆಚ್ಚ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಕೋಳಿವಾಡ ಅವರಿಗೆ ಸಲಹೆ ನೀಡಿದ್ದಾರೆ. ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ವಿಧಾನಸೌಧದ ವಜ್ರ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸ್ಪೀಕರ್ ಕೋಳಿವಾಡ ಹಾಗೂ ಸಭಾಪತಿ ಶಂಕರಮೂರ್ತಿಯವರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ಇದು ಕೆಲ ಆಡಳಿತ ಪಕ್ಷದ ಶಾಸಕರಿಗೆ ಕಣ್ಣು ಕೆಂಪಾಗುವಂತೆ ಮಾಡಿತ್ತು. ವಿಪಕ್ಷಗಳು ಕೂಡ ಟೀಕಾಪ್ರಹಾರ ನಡೆಸಿದ್ದವು. ರಾಜ್ಯದಲ್ಲಿ ಅತಿವೃಷ್ಟಿ, ಬರ ಇರುವ ಹಿನ್ನೆಲೆಯಲ್ಲಿ ಆಡಂಬರ ಬೇಡ ಎಂಬ ಒತ್ತಾಯ ಕೇಳಿಬಂದಿತ್ತು. ಇಷ್ಟೊಂದು ವೆಚ್ಚಕ್ಕೂ ಕೂಡ ಆರ್ಥಿಕ ಇಲಾಖೆ ಅಸಮ್ಮತಿ ಸೂಚಿಸಿತ್ತು. ಇದೆಲ್ಲದರ ನಡುವೆ ಇಂದು ಬೆಳಗ್ಗೆ ಸ್ಪೀಕರ್ ಕೋಳಿವಾಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ಬಂದು ಕಾರ್ಯಕ್ರಮದ ವಿಸ್ತೃತ ವರದಿ ಸಲ್ಲಿಸಿದ್ದರು.ಆದರೆ, ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಆಚರಣೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಕಾರ್ಯಕ್ರಮವನ್ನು 26 ಕೋಟಿ ರೂ. ಬದಲಿಗೆ 10 ಕೋಟಿ ರೂ. ವೆಚ್ಚದಲ್ಲಿ ಮುಗಿಸುವಂತೆ ಸೂಚನೆ ನೀಡಿದ್ದಾರೆ. ಮಾತ್ರವಲ್ಲ, ಶಾಸಕರಿಗೆ ಯಾವುದೇ ದುಬಾರಿ ಉಡುಗೊರೆ ನೀಡಬಾರದೆಂದು ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.