ER NEWS

News Subject: 
ಗೋಲ್ಡ್‌ ಬಿಸ್ಕೆಟ್‌ ಸ್ವೀಕರಿಸಲು ಬಿಜೆಪಿ, ಜೆಡಿಎಸ್‌ ನಕಾರ
Upload Image: 
Body: 

ವಿಧಾನಸೌಧದ ವಜ್ರ ಮಹೋತ್ಸವ ನೆನಪಿಗೆ ಚಿನ್ನದ ಬಿಸ್ಕೆಟ್‌ ನೀಡಿದರೆ ಅದನ್ನು ತಿರಸ್ಕರಿಸಲು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ ನಿರ್ಧರಿಸಿವೆ. ದುಂದು ವೆಚ್ಚಕ್ಕೆ ಆಸ್ಪದ ಮಾಡಿಕೊಡುವ ಇಂಥ ಪ್ರಸ್ತಾಪಕ್ಕೆ ಆಡಳಿತಾರೂಢ ಕಾಂಗ್ರೆಸ್‌ನಲ್ಲೂ ವಿರೋಧ ವ್ಯಕ್ತವಾಗಿದೆ.
ವಜ್ರ ಮಹೋತ್ಸವದ ಸವಿ ನೆನಪಿಗೆ ಉಭಯ ಸದನಗಳ ಸದಸ್ಯರಿಗೆ ಚಿನ್ನದ ಬಿಸ್ಕೆಟ್‌ ಉಡುಗೋರೆ ನೀಡಲು ಮುಂದಾಗಿರುವ ಬಗ್ಗೆ Electreps ಭಾನುವಾರ ವರದಿ ಪ್ರಕಟ ಮಾಡಿತ್ತು. ರಾಜಕೀಯ ವಲಯದಲ್ಲಿ ಇದು ವ್ಯಾಪಕ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಇದರ ಬೆನ್ನಿಗೇ ಚಿನ್ನದ ಬಿಸ್ಕೆಟ್‌ ಕೊಡುಗೆ ತಿರಸ್ಕರಿಸುವಂತೆ ತಮ್ಮ ಶಾಸಕರಿಗೆ ಸೂಚನೆ ಕೊಡುವ ತೀರ್ಮಾನಕ್ಕೆ ಬಿಜೆಪಿ, ಜೆಡಿಎಸ್‌ ಬಂದಿವೆ. ಚುನಾವಣೆ ಸನಿಹದಲ್ಲಿ ಇರುವುದರಿಂದ ಇಂತಹ ಉಡುಗೋರೆ ಸ್ವೀಕರಿಸಿದರೆ ವಿವಾದಕ್ಕೆ ಗುರಿಯಾಗಬೇಕಾಗುತ್ತದೆ. ಜನರ ದೃಷ್ಟಿಯಲ್ಲೂ ಸಣ್ಣವರಾಗಬೇಕಾಗುತ್ತದೆ ಎಂಬ ಆತಂಕ ಕಾಂಗ್ರೆಸ್‌ ಶಾಸಕರಲ್ಲೂ ಕಾಡತೊಡಗಿದೆ. ವಜ್ರ ಮಹೋತ್ಸವದ ಹೆಸರಿನಲ್ಲಿ ಹಣ ದುರುಪಯೋಗ ಬೇಡ. ಸಾಂಕೇತಿಕವಾಗಿ ಅಧಿವೇಶನ, ಚರ್ಚೆ ನಡೆಸಿದರೆ ಸಾಕು. ಚಿನ್ನದ ಬಿಸ್ಕೆಟ್‌ ಕೊಡಲು ಬಂದರೆ ಬಿಜೆಪಿಯವರು ಸ್ವೀಕರಿಸುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ತಿಳಿಸಿದ್ದಾರೆ.

ಸ್ವಕ್ಷೇತ್ರ ಕಡೂರಿನಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್‌ ಶಾಸಕ ವೈ.ಎಸ್‌.ವಿ. ದತ್ತ ಅವರೂ ಇಂತಹ ಉಡುಗೋರೆ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ. ಜನಸೇವೆಗೆ ಬಂದಿರುವ ಶಾಸಕರಿಗೆ ಬಿಸ್ಕೆಟ್‌ ಅಗತ್ಯವಿಲ್ಲವೆಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಸನದಲ್ಲಿ ಹೇಳಿದ್ದಾರೆ.
ದೂರು ನೀಡುವ ಸಾಧ್ಯತೆ ವಜ್ರ ಮಹೋತ್ಸವ ಆಚರಿಸಿ ಸಾರ್ವಜನಿಕರ ಹಣ ಪೋಲು ಮಾಡುವುದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಈ ವಿಚಾರವಾಗಿ ಈಗಾಗಲೇ ಸಾಕಷ್ಟು ವಿವಾದವಾಗಿದೆ. ಚಿನ್ನದ ಬಿಸ್ಕೆಟ್‌ ತೆಗೆದುಕೊಂಡರೆ ಜನರಿಂದ ಶಾಪ ಹಾಕಿಸಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಇಂತಹ ಉಡುಗೊರೆ ವಿತರಣೆಗೆ ಅವಕಾಶವನ್ನೇ ನೀಡಬಾರದು. ವಜ್ರ ಮಹೋತ್ಸವದ ವೆಚ್ಚವನ್ನೂ ಕಡಿತಗೊಳಿಸುವಂತೆ ಸಿಎಂ ಅವರನ್ನು ಭೇಟಿಯಾಗಿ ಒತ್ತಡ ತರಲಾಗುವುದು. ಅಗತ್ಯ ಕಂಡರೆ ಹೈಕಮಾಂಡ್‌ಗೂ ಈ ಬಗ್ಗೆ ದೂರು ರವಾನಿಸಲಾಗುವುದು ಎಂದು ಹೆಸರು ಹೇಳಬಯಸದ ಕಾಂಗ್ರೆಸ್‌ ಶಾಸಕರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಜ್ರ ಮಹೋತ್ಸವದಲ್ಲಿ ಯಾವುದೇ ಕಾಣಿಕೆ ಬೇಡ. ನಮ್ಮ ಕಾಲದಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಂದ ಸುವರ್ಣಸೌಧ ಉದ್ಘಾಟನೆ ಮಾಡಿಸಿದಾಗಲೂ ಯಾವುದೇ ಉಡುಗೊರೆ ನೀಡಿಲ್ಲ. ಸಾಂಕೇತಿಕ ಆಚರಣೆ, ಚರ್ಚೆ ಸಾಕು. ಹಣ ದುರುಪಯೋಗ ಬೇಡ. ಬಿಸ್ಕೆಟ್‌ ಕೊಟ್ಟರೆ ನಾವು ಅದನ್ನು ಸ್ವೀಕರಿಸುವುದಿಲ್ಲ.
- ಜಗದೀಶ ಶೆಟ್ಟರ್‌, ಪ್ರತಿಪಕ್ಷ ನಾಯಕ

ಬಿಜೆಪಿ ಶಾಸಕರು ಜನಸೇವೆಗೆ ಬಂದವರು. ನಮಗೆ ಚಿನ್ನದ ಬಿಸ್ಕೆಟ್‌ನ ಅವಶ್ಯವಿಲ್ಲ. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಶಾಸಕರಿಗೆ ಸೂಚನೆ ನೀಡಲಿದ್ದಾರೆ. ಸಾರ್ವಜನಿಕ ಹಣದಿಂದ ಬಿಸ್ಕೆಟ್‌ ಕೊಡುವ ಬದಲು ಕಾಂಗ್ರೆಸ್‌ ಫಂಡ್‌ನಿಂದಲೇ ಕೊಟ್ಟುಕೊಳ್ಳಲಿ.
- ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ
-------------------------------
ಚಿನ್ನದ ಬಿಸ್ಕೆಟ್‌ ಸ್ವೀಕರಿಸುವುದಿಲ್ಲ. ಇದನ್ನು ತೆಗೆದುಕೊಳ್ಳುವ ಶಾಸಕರಿಗೆ ಜನರೇ ಬುದ್ಧಿ ಕಲಿಸಬೇಕು. ಜನಪ್ರತಿನಿಧಿಗಳಿಗೆ ಕನಿಷ್ಠ ಬದ್ಧತೆಯಿರಬೇಕು.
- ವೈ.ಎಸ್‌.ವಿ. ದತ್ತ, ಜೆಡಿಎಸ್‌ ಶಾಸಕ

Reach Count: 
8