ER NEWS
ನಗರ ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದು, ಇಂದು ಇನ್ನೋರ್ವ ಬಾಲಕಿ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಸಿ.ವಿ.ರಾಮನ್ ನಗರದಲ್ಲಿ ನಡೆದಿದೆ. ಕೃಷ್ಣಪ್ಪ ಗಾರ್ಡನ್ ಬಳಿ 16 ವರ್ಷದ ನರಸಮ್ಮ ಎಂಬ ಬಾಲಕಿ 7 ಗಂಟೆ ಸುಮಾರಿಗೆ ಶೌಚಾಲಯಕ್ಕೆಂದು ತೆರಳಿದ್ದ ವೇಲೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ತಿಳಿದು ಬಂದಿದೆ. ಶವ ಕೂಡಲೇ ಪತ್ತೆಯಾಗಿದ್ದು, ಕೊಚ್ಚಿ ಹೋದಲ್ಲಿದ್ದ 400 ಮೀಟರ್ ದೂರದಲ್ಲಿ ಶವವನ್ನು ಮೇಲಕ್ಕೆತ್ತಲಾಗಿದೆ.
ನರಸಮ್ಮ ಕಲಬುರಗಿ ಮೂಲದ ವೆಂಕಪ್ಪ ಮತ್ತು ಕಾಶಿ ದಂಪತಿಯ ಪುತ್ರಿ ಎಂದು ತಿಳಿದು ಬಂದಿದ್ದು, 15 ದಿನಗಳಲ್ಲಿ ಈಕೆಗೆ ಮದುವೆ ನಡೆಸಲು ಸಿದ್ದತೆಗಳು ನಡೆದಿದ್ದವು ಎಂದು ತಿಳಿದು ಬಂದಿದೆ. ತಾಯಿಯ ಶವ ಪತ್ತೆ ಮಗಳ ಶವಕ್ಕಾಗಿ ಮುಂದುವರಿದ ಶೋಧ ಶುಕ್ರವಾರ ಸಂಜೆ ಭಾರೀ ಮಳೆಯ ಬಳಿಕ ಕುರುಬರಹಳ್ಳಿ ರಾಜಕಾಲುವೆ ಉಕ್ಕಿ ಹರಿದ ಪರಿಣಾಮ ಕೊಚ್ಚಿ ಹೋಗಿದ್ದ ತಾಯಿ ಪುಷ್ಪ ಶವ ಪತ್ತೆಯಾಗಿದ್ದು ಮಗಳಾದ ನಿಂಗಮ್ಮ ಶವಕ್ಕಾಗಿ ಶೋಧ ನಡೆಸಲಾಗುತ್ತಿದೆ.
ಕುಂಬಳಗೋಡು ರಾಜ ಕಾಲುವೆ ಬಳಿ ಪುಷ್ಪ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಮನೆಯವರಿಗೆ ಹಸ್ತಾಂತರಿಸಲಾಗಿದೆ. ಅದೇ ಸ್ಥಳದಲ್ಲಿ ನಿಂಗವ್ವಳ ಮೃತದೇಹಕ್ಕಾಗಿ ಎನ್ಡಿಆರ್ಎಫ್ , ಬಿಬಿಎಂಪಿ ಸಿಬ್ಬಂದಿ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಮುಂದುವರಿಸಿದ್ದಾರೆ. ಮನೆಯವರ ರೋಧನ ಮುಗಿಲು ಮುಟ್ಟಿದೆ.